ಬೆಂಗಳೂರು: ಸುತ್ತಲಿನ ಪ್ರದೇಶಗಳ ಪರಿಸರ ಹಾನಿಯಾಗಿದೆ ಎಂದು ರಾಜ್ಯದ 12 ಸಕ್ಕರೆ ಕಾರ್ಖಾನೆಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಬಂದಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ಸಿನ ಆರ್.ಬಿ. ತಿಮ್ಮಾಪೂರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈಗಾಗಲೇ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಪ್ರಕರಣ ದಾಖಲಿಸಿ ₹ 80.54 ಲಕ್ಷ ದಂಡ ವಸೂಲಿ ಮಾಡಿ ನಷ್ಟಕ್ಕೆ ಒಳಗಾದ ರೈತರಿಗೆ ನೀಡಲಾಗಿದೆ’ ಎಂದರು.
ಪ್ರಶ್ನೆ ಬಗ್ಗೆ ಅಪಸ್ವರ: ಕಾಂಗ್ರೆಸ್ಸಿನ ಹರೀಶ್ ಕುಮಾರ್ ಅವರು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಳಿದ್ದ ಪ್ರಶ್ನೆ ಪ್ರಾಥಮಿಕ ಶಿಕ್ಷಣಕ್ಕೆ ವರ್ಗಾವಣೆ ಆಗಿದ್ದಕ್ಕೆ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆಡಳಿತ ಪಕ್ಷ ನಾಯಕರ ವಿರುದ್ಧ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಗೈರಾಗಿದ್ದ ಸಚಿವ ಸುರೇಶ್ ಕುಮಾರ್ ಬಂದ ನಂತರ ಉತ್ತರಿಸಲಿದ್ದಾರೆ ಎಂಬ ಮಾಹಿತಿ ನೀಡಲಾಯಿತು.
ಸ್ಥಳೀಯರಿಗೆ ಉದ್ಯೋಗ: ಜೆಡಿಎಸ್ನ ಅಪ್ಪಾಜಿಗೌಡ ಅವರು ಮಂಡ್ಯ ಜಿಲ್ಲೆಯ ಜನರಿಕ್ ಔಷಧ ಮಳಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಶ್ರೀರಾಮುಲು ಉತ್ತರಿಸಿ, ‘ಸ್ಥಳೀಯರಿಗೆ ಉದ್ಯೋಗ ನೀಡುವ ಸಂಬಂಧ ಕ್ರಮ ಕೈಗೊಳ್ಳುತ್ತೇನೆ’ ಎಂದರು.