ಬೆಂಗಳೂರು: ಪಾಲಿಕೆ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ 'ಗೊರಕೆ ಸಾಕು, ಪೊರಕೆ ಬೇಕು' ಅಭಿಯಾನಕ್ಕೆ ಆಮ್ ಆದ್ಮಿ ಪಕ್ಷವು (ಎಎಪಿ) ಭಾನುವಾರ ಚಾಲನೆ ನೀಡಿತು.
ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು ಮಂಜುನಾಥ ನಗರದ ನಿವಾಸಿಗಳಿಗೆ ಪಕ್ಷದ ಬಾವುಟ ನೀಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಬೆಂಗಳೂರಿನ ಜನತೆ ಮೂರು ಪಕ್ಷಗಳ ಕೆಟ್ಟ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಇಲ್ಲಿನ ಸರ್ಕಾರಗಳವೈಫಲ್ಯಗಳನ್ನು ಜನರಿಗೆ ತಲುಪಿಸಲು ಪ್ರತಿ ವಾರ ಅಭಿಯಾನ ಮಾಡಲಿದ್ದೇವೆ. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ‘ಈ ಅಭಿಯಾನದ ಮೂಲಕ ಮೂರು ಪಕ್ಷಗಳಿಗಿಂತ ಆಮ್ ಆದ್ಮಿ ಪಕ್ಷ ಹೇಗೆ ಭಿನ್ನ ಎಂದು ಮನವರಿಕೆ ಮಾಡಿಕೊಡಲಾಗುವುದು. ಸಮೀಕ್ಷೆಯೊಂದರ ಪ್ರಕಾರ ಬೆಂಗಳೂರಿನ ಶೇ 70ರಷ್ಟು ಜನ ನಗರದಲ್ಲೂ ದೆಹಲಿ ಮಾದರಿಯ ಆಡಳಿತ ಬೇಕು ಎಂದಿದ್ದಾರೆ. ನಾವು ಅಧಿಕಾರಕ್ಕೆ ಬಂದು, ಜನರ ಈ ನಿರೀಕ್ಷೆ ಉಳಿಸಿಕೊಳ್ಳುತ್ತೇವೆ’ ಎಂದರು.