ಬೆಂಗಳೂರು: ಎಚ್ಎಎಲ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಟಿಪ್ಪರ್ ಲಾರಿ–ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಲಾರಿಯ ಚಕ್ರ ಮೈ ಮೇಲೆ ಹರಿದು ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ.
‘ತಮಿಳುನಾಡಿವ ಶ್ರೀದೇವಿ (21) ಹಾಗೂ ಒಂದು ವರ್ಷದ ಮಗು ದಕ್ಷಿತ್ ಮೃತರು. ಶ್ರೀದೇವಿ ಅವರ ಪತಿ ಶಿವಕುಮಾರ್ ಬೈಕ್ ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಅವರಿಗೂ ತೀವ್ರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಕೆ.ಎಂ. ಶಾಂತರಾಜು ತಿಳಿಸಿದರು.
‘ಟಿಪ್ಪರ್ ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ.’ ಎಂದೂ ಹೇಳಿದರು.
‘ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಉಡುಪಿ ಪಾರ್ಕ್ ಹೋಟೆಲ್ ಮುಂಭಾಗದಲ್ಲಿ ಹೊರಟಿದ್ದ ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲೇ ಬಿದ್ದಿದ್ದ ಶ್ರೀದೇವಿ ಹಾಗೂ ಮಗುವಿನ ಮೇಲೆ ಲಾರಿಯ ಚಕ್ರ ಹರಿದು ಹೋಗಿತ್ತು.’ ಎಂದೂ ಪೊಲೀಸರು ಹೇಳಿದರು.
‘ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಶ್ರೀದೇವಿ ಹಾಗೂ ಮಗು, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು.’ ಎಂದರು.