ಬೆಂಗಳೂರು: ಅಲೆಮಾರಿ ಸಮುದಾಯಗಳ ಏಳಿಗೆಗೆ ಬಜೆಟ್ನಲ್ಲಿ ಕನಿಷ್ಠ ₹ 250 ಕೋಟಿ ಮೀಸಲಿಡುವಂತೆ ಅಲೆಮಾರಿ ಬುಡಕಟ್ಟು ಮಹಾಸಭಾ ಒತ್ತಾಯಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ 74 ಅಲೆಮಾರಿ ಸಮುದಾಯಗಳಿವೆ. ಅಲೆಮಾರಿ ಅಭಿವೃದ್ಧಿ ಕೋಶ ರಚಿಸಲಾಗಿದ್ದು, ಅನುದಾನ ಇಲ್ಲದೆ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಈ ಕೋಶವನ್ನೇ ಅಲಮಾರಿ ಅಭಿವೃದ್ಧಿ ನಿಗಮವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮಹಾಸಭಾದ ಮುಖಂಡರು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಅಲೆಮಾರಿ ಸಮುದಾಯದ2 ಲಕ್ಷ ಜನರಿದ್ದು, ಕೌದಿ ಬಟ್ಟೆಗಳಿಂದ ಟೆಂಟ್ಗಳನ್ನು ನಿರ್ಮಿಸಿಕೊಂಡು ಪ್ರಾಣಿಗಳಂತೆ ಜೀವನ ಮಾಡುತ್ತಿದ್ದಾರೆ. ಇವರಿಗೆ ಶಾಶ್ವತ ಸೂರು ಒದಗಿಸಲು ಬಜೆಟ್ನಲ್ಲಿ ‘ಟೆಂಟ್ ಮುಕ್ತ ಕರ್ನಾಟಕ’ದ ಘೋಷಣೆ ಮಾಡಬೇಕು. ಅದಕ್ಕಾಗಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕಿಗೆ ಒಂದು ನವಗ್ರಾಮ ನಿರ್ಮಾಣ ಮಾಡಿ ಅಲ್ಲಿ ಅಲೆಮಾರಿಗಳಿಗೆ ಶಾಶ್ವತ ಸೂರು ಒದಗಿಸಬೇಕು. ಅಲೆಮಾರಿಗಳ ಪಾರಂಪರಿಕ ವೃತ್ತಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಬಜೆಟ್ ₹5 ಕೋಟಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಅಲೆಮಾರಿ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತ ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಮೀಕ್ಷೆ ನಡೆಸಬೇಕು. ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಅಲೆಮಾರಿ ಸಮುದಾಯ ಭವನಗಳನ್ನು ನಿರ್ಮಿಸಲು ತಲಾ ₹5 ಕೋಟಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.