ಬೆಂಗಳೂರು:ಹೆರೋಹಳ್ಳಿ ವಾರ್ಡ್ನ ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು (46) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಗೆಳತಿ ರೇಖಾ (38) ಎಂಬುವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೆ.ಆರ್.ಪುರ ನಿವಾಸಿಯಾದ ರೇಖಾ ತನ್ನ ಪತಿಯನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದಳು. ಹೀಗಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಅನಂತರಾಜು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
‘ಅನಂತರಾಜು ಆತ್ಮಹತ್ಯೆಯ ವಿಷಯ ತಿಳಿದೊಡನೆ ರೇಖಾ ನಾಪತ್ತೆಯಾಗಿದ್ದರು. ಮಂಗಳವಾರ ಮಧ್ಯಾಹ್ನ ಆಕೆಯನ್ನು ಬಂಧಿಸಲಾಗಿದೆ’ ಎಂದುಬ್ಯಾಡರಹಳ್ಳಿ ಠಾಣೆ ಮೂಲಗಳು ತಿಳಿಸಿವೆ.
‘ಅನಂತರಾಜು ಹಾಗೂ ರೇಖಾ ಆರು ವರ್ಷಗಳಿಂದ ಪರಿಚಿತರಾಗಿದ್ದರು. ಅನಂತರಾಜು ಮನೆಯಲ್ಲಿ ಸಿಕ್ಕಿದ್ದ ಮರಣ ಪತ್ರದಲ್ಲಿ ಆಕೆಯ ಹೆಸರೂ ಇತ್ತೂ. ಈ ಪ್ರಕರಣದಲ್ಲಿ ರೇಖಾ ಪತಿ ವಿನೋದ್ ಹಾಗೂ ಆಕೆಯ ಸ್ನೇಹಿತೆಯ ಪಾತ್ರವಿಲ್ಲ’ ಎಂದೂ ಮೂಲಗಳು ಹೇಳಿವೆ.
‘ರೇಖಾ ಹಾಗೂ ಅನಂತರಾಜು ದೈಹಿಕ ಸಂಪರ್ಕ ಹೊಂದಿದ್ದರು. ಇದನ್ನು ನೋಡಿದ್ದ ಪತ್ನಿ ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದರು. ಆ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದೂ ಮಾಹಿತಿ ನೀಡಿವೆ.