ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟಿಸಿದರು.
ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ನಗದು ಸಿಕ್ಕಿದೆ. ಅದೇ ರೀತಿ ಎಲ್ಲ ಶಾಸಕರ ಮನೆ ಹಾಗೂ ಕಚೇರಿಗಳ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿದರು.
‘ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಶಾಸಕರೊಬ್ಬರ ಮನೆಯಲ್ಲಿ ಅಪಾರ ನಗದು ಪತ್ತೆ ಯಾಗಿರುವುದು ಗಂಭೀರ ವಿಚಾರ. ಹಣದ ಮೂಲ ಯಾವುದು? ಅಷ್ಟೊಂದು ಪ್ರಮಾಣದಲ್ಲಿ ಹಣ ಯಾವ ಕಾರಣಕ್ಕೆ ಸಂಗ್ರಹಿಸಲಾಗಿತ್ತು? ಈ ಪ್ರಕರಣದ ಕುರಿತು ಸಿಬಿಐ, ಇ.ಡಿ, ಐ.ಟಿ ಸಂಸ್ಥೆಗಳಿಂದ ತನಿಖೆಯಾಗಬೇಕು’ ಎಂದು ರಾಜ್ಯ ಅಧ್ಯಕ್ಷ ಪೃಥ್ವಿರೆಡ್ಡಿ ಆಗ್ರಹಿಸಿದರು.
ಬಿಜೆಪಿ ಶಾಸಕರಿಂದ ರಾಜ್ಯದ ಬೊಕ್ಕಸ ಲೂಟಿಯಾಗುತ್ತಿದೆ. ಶೇ 40 ಕಮಿಷನ್ ದಂಧೆಯ ನೈತಿಕೆ ಹೊಣೆಹೊತ್ತು ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
‘ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವೆಂದರೆ ಈಗಿನ ಬಿಜೆಪಿ ಸರ್ಕಾರ. ಬೊಮ್ಮಾಯಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಯು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಿಜೆಪಿ ಶಾಸಕರು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ’ ಎಂದು ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಹೇಳಿದರು.