ಬೆಂಗಳೂರು: ಬಜೆಟ್ನಲ್ಲಿ ವಕೀಲರಿಗೆ ಮತ್ತು ನ್ಯಾಯಾಂಗ ಇಲಾಖೆಗೆ ಹೆಚ್ಚು ಅನುದಾನ ನೀಡುವಂತೆ ಬಿಜೆಪಿ ಕಾನೂನು ಪ್ರಕೋಷ್ಠವು ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಒಟ್ಟು 1.11 ಲಕ್ಷಕ್ಕೂ ಹೆಚ್ಚು ವಕೀಲರು ಇದ್ದು, 200 ವಕೀಲರ ಸಂಘಗಳಿವೆ. ಈ ವಕೀಲರ ಹಾಗೂ ವಕೀಲರ ಸಂಘಗಳ ಮೂಲ ಬೆಂಗಳೂರಿನ ಕರ್ನಾಟಕ ರಾಜ್ಯ ವಕೀಲರ ಪರಿಷತ್. ಹಳೆಯ ಚುನಾವಣಾ ಆಯೋಗದ ಕಟ್ಟಡವನ್ನು ತಾತ್ಕಾಲಿಕವಾಗಿ ಪರಿಷತ್ತಿಗೆ ನೀಡಲಾಗಿದೆ. ಅದರ ಸಂಪೂರ್ಣ ಸ್ವಾಧೀನತೆಯನ್ನು ರಾಜ್ಯ ವಕೀಲರ ಪರಿಷತ್ತಿಗೇ ನೀಡಬೇಕು ಎಂದು ಮನವಿ ಮಾಡಲಾಗಿದೆ.
ವಕೀಲರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ವಿಮೆ ಕಲ್ಪಿಸಲು ಬಜೆಟ್ನಲ್ಲಿ ಅನುದಾನ ಘೋಷಿಸಬೇಕು. ರಾಜ್ಯದಲ್ಲಿ ಸಹಾಯಕ ಸರ್ಕಾರಿ ವಕೀಲರು ಹಾಗೂ ಸ್ಪೆಷಲ್ ಪಿ.ಪಿ, ಎಜಿಪಿ, ಡಿಜಿಪಿ, ಜಿಎ,ಜಿಪಿ ಖಾಲಿ ಇದ್ದ ಹುದ್ದೆಗಳನ್ನು ಆದಷ್ಟು ಶೀಘ್ರ ಭರ್ತಿ ಮಾಡಬೇಕು ಎಂದು ಕೋರಲಾಯಿತು.
ಕಾನೂನು ಪ್ರಕೋಷ್ಠದ ಸಂಚಾಲಕ ಎಸ್.ಎಸ್. ಮಿಟ್ಟಲಕೋಡ್, ಪ್ರಕೋಷ್ಠದ ಸಹ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ಮಾಜಿ ಸಂಚಾಲಕ ವಿವೇಕ್ ರೆಡ್ಡಿ ಮತ್ತು ಆರ್. ರಾಜಣ್ಣ ನಿಯೋಗದಲ್ಲಿದ್ದರು.