ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವೂರಿನ ನೀರು; ಅರ್ಕಾವತಿಗೆ ಎಳ್ಳುನೀರು? ಹೋರಾಟಗಾರರ ಆಕ್ರೋಶ

ರಾಜಧಾನಿಯಲ್ಲಿ ನದಿ ಉಳಿಸಿಕೊಳ್ಳುವ ಭರವಸೆಗೆ ಕೊಳ್ಳಿ ಇಟ್ಟ ಸರ್ಕಾರ
Last Updated 25 ಜುಲೈ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಧಾನಿಗೆ ನೂರಾರು ಕಿಲೋಮೀಟರ್‌ ದೂರದಿಂದ ಕುಡಿಯುವ ನೀರು ತರಲು ಅತ್ಯುತ್ಸಾಹದಿಂದ ಯೋಜನೆ ರೂಪಿಸುವ ಸರ್ಕಾರ ನಗರದ ಸೆರಗಿನಲ್ಲೇ ಇರುವ ಅರ್ಕಾವತಿ ಹಾಗೂ ಕುಮುದ್ವತಿ ನದಿಗಳ ಪುನಶ್ಚೇತನಕ್ಕೆ ‘ಎಳ್ಳುನೀರು’ ಬಿಡುವಂತಹ ನಿರ್ಧಾರ ತಳೆದಿರುವುದು ವಿಪರ್ಯಾಸ’

ಅರ್ಕಾವತಿ ಹಾಗೂ ಕುಮುದ್ವತಿ ನದಿಗಳ ಸಂರಕ್ಷಣಾ ಪ್ರದೇಶವನ್ನು 1 ಕಿ.ಮೀಟರ್‌ನಿಂದ 500 ಮೀ.ಗೆ ಕುಗ್ಗಿಸಲು ಹೊರಟಿರುವ ಸರ್ಕಾರದ ನಿರ್ಧಾರದ ಬಗ್ಗೆ ಈ ನದಿಗಳ ಪುನಶ್ಚೇತನಕ್ಕಾಗಿ ಹೋರಾಟ ನಡೆಸಿದವರ ಪ್ರತಿಕ್ರಿಯೆ ಇದು.

‘ನಗರಕ್ಕೆ ಎತ್ತಿನಹೊಳೆಯ ನೀರನ್ನು ತರಲು ಸಾವಿರಾರು ಕೋಟಿ ವೆಚ್ಚ ಮಾಡುತ್ತಿದೆ. ಇತ್ತೀಚೆಗೆ ಶರಾವತಿಯಿಂದಲೂ ಕುಡಿಯುವ ನೀರು ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಬದಲು ಇಲ್ಲೇ ಇರುವ ಅರ್ಕಾವತಿ ಹಾಗೂ ಕುಮುದ್ವತಿ ನದಿಗಳ ಪುನರುಜ್ಜೀವನದ ಬಗ್ಗೆ ಪ್ರಯತ್ನವನ್ನೇ ಮಾಡುತ್ತಿಲ್ಲ. ಜತೆಗೆ, ಈ ನದಿಗಳ ರಕ್ಷಣೆಗೆ ಇರುವ ನಿಯಂತ್ರಣಾ ಕ್ರಮಗಳನ್ನೂ ದುರ್ಬಲಗೊಳಿಸುತ್ತಿದೆ. ಇದು ನೋವಿನ ಸಂಗತಿ’ ಎನ್ನುತ್ತಾರೆ ಅರ್ಕಾವತಿ ನದಿ ಪುನರುಜ್ಜೀವನ ಆಂದೋಲನದ ಕಾರ್ಯಕರ್ತ ಸೀತಾರಾಮ್‌.

‘ನಗರವು ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಜಲಮೂಲಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಕಠಿಣ ನಿಯಮಗಳನ್ನು ರೂಪಿಸಬೇಕು. ಆದರೆ, ಸರ್ಕಾರ ಈ ನದಿಗಳ ಸಂರಕ್ಷಣಾ ಪ್ರದೇಶವನ್ನು ಕಡಿಮೆ ಮಾಡುವ ಮೂಲಕ ಇವುಗಳ ಪುನರುಜ್ಜೀವನಕ್ಕೆ ಇರುವ ಅವಕಾಶಕ್ಕೂ ಕಲ್ಲು ಹಾಕಿದೆ. ಮುಂಬರುವ ಸರ್ಕಾರವಾದರೂ ಈ ಆದೇಶವನ್ನು ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ಕಾರ ಅಲ್ಪಮತಕ್ಕೆ ಕುಸಿದ ಹೊತ್ತಿನಲ್ಲೇ ತುರ್ತಾಗಿ ಸಭೆ ನಡೆಸಿ ಈ ಆದೇಶ ಹೊರಡಿಸಿರುವುದನ್ನು ನೋಡಿದರೆ, ಇಲ್ಲಿ ಆಗಿರುವ ಉಲ್ಲಂಘನೆಗಳನ್ನು ಸಕ್ರಮಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿರುವುದು ಸ್ಪಷ್ಟ. 2003ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಈ ನದಿಗಳಿಗೆ ಸಂರಕ್ಷಣಾ ಪ್ರದೇಶವನ್ನು ನಿಗದಿಪಡಿಸಿತ್ತು. ಅದರ ಜಾರಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿ ತಿಂಗಳೂ ಸಭೆ ನಡೆಯಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೈಗಾರಿಕೆಗಳ ಸ್ಥಾಪನೆ, ನಗರೀಕರಣ, ಮರಳುಗಾರಿಕೆ ದಂಧೆಗಳ ಪರಿಣಾಮವಾಗಿ ಅವಸಾನದ ಅಂಚಿಗೆ ತಲುಪಿದ್ದ ನದಿಯನ್ನು ಪುನಶ್ಚೇತನಗೊಳಿಸಬಹುದು ಎಂಬ ವಿಶ್ವಾಸ ಈಗಲೂ ಕೆಲವು ಜನರಲ್ಲಾದರೂ ಉಳಿದಿದೆ. 2003ರ ಅಧಿಸೂಚನೆ ಇದಕ್ಕೆ ಒತ್ತಾಸೆಯಾಗಿ ನಿಂತಿತ್ತು. ಅದರ ಪರಿಣಾಮವಾಗಿ ಈ ನದಿಗಳ ಜಲಾನಯನ ಪ್ರದೇಶಗಳಲ್ಲಿ ಜಲಕಾಯಗಳ ಪುನರುಜ್ಜೀವನದ ಪ್ರಯತ್ನಗಳನ್ನು ಜನರೇ ಆರಂಭಿಸಿದ್ದರು. ಸರ್ಕಾರದ ಆದೇಶವು ನದಿಗಳನ್ನು ಉಳಿಸಿಕೊಳ್ಳುವ ಕುರಿತು ಉಳಿದಿದ್ದ ಅಲ್ಪ ಸ್ವಲ್ಪ ಭರವಸೆಯನ್ನೂ ಕಿತ್ತುಕೊಳ್ಳುವಂತಿದೆ’ ಎಂದು ಯುವಸಂಚಲನ ಸಂಸ್ಥೆಯ ಅಧ್ಯಕ್ಷ ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ಅಂತರ್ಜಲದ ವಿಪರೀತ ಬಳಕೆಗೆ ನಿಯಂತ್ರಣ

ಅಂತರ್ಜಲ ಬಳಕೆಗೆ ಕಡಿವಾ ಅಗತ್ಯಅರ್ಕಾವತಿ ಹಾಗೂ ಕುಮುದ್ವತಿ ನದಿಗಳನ್ನು ಪುನಶ್ಚೇತನಗೊಳಿಸಬೇಕಾದರೆ ಅಂತರ್ಜಲದ ವಿಪರೀತ ಬಳಕೆಯನ್ನು ಮೊದಲು ನಿಯಂತ್ರಿಸಬೇಕು ಎನ್ನುತ್ತಾರೆ ಈ ನದಿಗಳ ಕುರಿತು ಅಧ್ಯಯನ ನಡೆಸಿರುವ ಏಟ್ರೀ ಸಂಸ್ಥೆಯ ಹಿರಿಯ ವಿಜ್ಞಾನಿಗಳು.

‘ಈ ಎರಡೂ ನದಿಗಳ ಜಲಾನಯನ ಪ್ರದೇಶಗಳ ರೈತರು ಕೃಷಿಗೆ ಕೊಳವೆಬಾವಿಗಳನ್ನೇ ನೆಚ್ಚಿಕೊಂಡಿದ್ದಾರೆ. ನೀಲಗಿರಿ ತೋಪುಗಳೂ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುತ್ತಿವೆ. ಇದರ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಹಿರಿಯ ವಿಜ್ಞಾನಿ ಶರತ್‌ಚಂದ್ರ ಲೇಲೆ ಸಲಹೆ ನೀಡಿದರು.

ತಿಪ್ಪಗೊಂಡನಹಳ್ಳಿ ಜಲಾಶಯದ ಒಳಹರಿವು ಕಡಿಮೆಯಾಗಿದ್ದಕ್ಕೆ ಹಾಗೂ ಮಲಿನ ನೀರು ಸೇರುವುದನ್ನು ತಪ್ಪಿಸಲಿಕ್ಕೆ 2003ರಲ್ಲಿ ನಾಲ್ಕು ವಲಯಗಳನ್ನು ಗುರುತಿಸಿ ಅಲ್ಲಿ ಕೆಲವು ಚಟುವಟಿಕೆಗಳಿಗೆ ನಿಬಂಧನೆಗಳನ್ನು ಜಾರಿಗೆ ತರಲಾಯಿತು. ಇದಾಗಿ 16 ವರ್ಷಗಳ ಬಳಿಕವೂ ಈ ಎರಡೂ ಆಶಯಗಳು ಈಡೇರಿಲ್ಲ.

‘ಕುಮುದ್ವತಿ ಹಾಗೂ ಅರ್ಕಾವತಿ ನದಿಗಳಲ್ಲದೆಯೂ ಇನ್ನೂ ಅನೇಕ ಹಳ್ಳಗಳ ಮೂಲಕವೂ ಈ ಜಲಾಶಯಕ್ಕೆ ನೀರು ಸೇರುತ್ತದೆ. ಇದರ ಜಲಾನಯನ ಪ್ರದೇಶದ ವಸತಿ ಹಾಗೂ ಕೈಗಾರಿಕೆಗಳಿಂದ ಬರುವ ಕೊಳಚೆ ನೀರು ಜಲಾಶಯ ಸೇರದಂತೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದರು.

‘ಪೀಣ್ಯ ಕೈಗಾರಿಕೆ ಪ್ರದೇಶಗಳಲ್ಲಿ ಕೈಗಾರಿಕೆಗಳು ಶುದ್ಧೀಕರಿಸದೆ ಬಿಡುವ ರಾಸಾಯನಿಕಯುಕ್ತ ನೀರು ಸೇರುವುದು ಕೂಡಾ ತಿಪ್ಪಗೊಂಡನಹಳ್ಳಿ ಜಲಾಶಯವನ್ನೇ. ಜಲಾಶಯಕ್ಕೆ ಮಲಿನ ನೀರು ಸೇರುವುದನ್ನು ತಡೆಯದೇ ಏನೇ ವಲಯ ನಿಬಂಧನೆ ರೂಪಿಸಿದರೂ ಪ್ರಯೋಜನವಿಲ್ಲ. ನದಿಯ ಪುನರುಜ್ಜೀವನಕ್ಕೆ ವೈಜ್ಞಾನಿಕ ಯೋಜನೆರೂಪಿಸಿ ಅನುಷ್ಠಾನಗೊಳಿಸಬೇಕು’ ಎಂದು ಸಂಸ್ಥೆಯ ಇನ್ನೊಬ್ಬ ಹಿರಿಯ ವಿಜ್ಞಾನಿ ವೀಣಾ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT