ಬೆಂಗಳೂರು: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಉದ್ಯಾನನಗರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅಲ್ಲಲ್ಲಿ ಜೋರು ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಇದ್ದ ಮಂಜು ಮುಸುಕಿದ ವಾತಾವರಣ ಇಂದು ಕೂಡ ಮುಂದುವರೆದಿದೆ.
ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ಚರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇನ್ನೂ 24 ಗಂಟೆ ಆಸನಿ ಚಂಡಮಾರುತದ ಪ್ರಭಾವ ಬೆಂಗಳೂರು ನಗರ ಹಾಗೂ ರಾಜ್ಯದ ಹಲವೆಡೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಲ್ಲದೇ, ಕಳೆದ 22 ವರ್ಷಗಳಲ್ಲೇ ಮೇ ತಿಂಗಳಲ್ಲಿ ಅತ್ಯಂತ ಕಡಿಮೆ ತಾಪಮಾನವನ್ನುಬೆಂಗಳೂರು ಹೊಂದಿರುವುದು ಕಂಡು ಬಂದಿದೆ. ಮೇ 11 ರಂದು ಬೆಂಗಳೂರಿನಲ್ಲಿ 24.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ನಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಅಸನಿ ಚಂಡಮಾರುತ ಆಂಧ್ರ ಹಾಗೂ ಒಡಿಶಾ ಕರಾವಳಿ ದಾಟಿದ್ದು ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಇದರ ಪ್ರಭಾವದಿಂದಾಗಿ ಆಂದ್ರಪ್ರದೇಶ ಒಡಿಶಾದಲ್ಲಿ ನಿನ್ನೆ ವ್ಯಾಪಕ ಮಳೆಯಾಗಿದೆ.