ಬೆಂಗಳೂರು: ಲಾಕ್ಡೌನ್ ಪರಿಹಾರ ವಾಗಿ ಆಟೊ ಚಾಲಕರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನಕ್ಕೆ ಒತ್ತಾಯಿಸಿ, ‘ಎಲ್ಲಿ ₹5 ಸಾವಿರ?’ ಘೋಷವಾಕ್ಯದೊಂದಿಗೆ ಆಮ್ ಆದ್ಮಿ ಪಕ್ಷದ (ಎಎಪಿ) ಆಟೊ ಘಟಕ ಹಾಗೂ ವಿವಿಧ ಆಟೊ ಚಾಲಕ ಸಂಘಗಳ ನೇತೃತ್ವದಲ್ಲಿ ಆಟೊ ಚಾಲಕರು ಬುಧವಾರ ಪ್ರತಿಭಟನೆ ನಡೆಸಿದರು.
ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ‘ಕೊರೊನಾ ನೆಪದಲ್ಲಿ ರಾಜ್ಯ ಸರ್ಕಾರ ಲೂಟಿ ಹೊಡೆದಿದೆ. ಇದನ್ನು ಪ್ರಶ್ನಿಸಬೇಕಿದ್ದ ವಿರೋಧ ಪಕ್ಷಗಳು ಕೂಡ ಸರ್ಕಾರದ ಜತೆ ಶಾಮೀಲಾಗಿ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿವೆ. ಇದು ಒಳ ಒಪ್ಪಂದವಲ್ಲದೆ ಮತ್ತೇನು?’ ಎಂದು ಪ್ರಶ್ನಿಸಿದರು.
‘ಆಟೊ ಚಾಲಕರಿಗೆ ಸರ್ಕಾರ ₹5 ಸಾವಿರ ಪರಿಹಾರ ನೀಡುವ ಭರವಸೆ ಯನ್ನು ಹುಸಿ ಮಾಡಿದೆ. ಚಾಲಕರ ಖಾತೆಗೆ 15 ದಿನದಲ್ಲಿ ಪರಿಹಾರದ ಹಣ ಹಾಕದಿದ್ದರೆ, ಸಂಸದರು, ಶಾಸಕರು, ಸಚಿವರ ಮನೆ ಮುಂದೆ ‘₹5 ಸಾವಿರ ಕೊಡಿ’ ಅಭಿಯಾನ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ರಾಜ್ಯದ 7 ಲಕ್ಷ ಆಟೊ ಚಾಲಕರಲ್ಲಿ 3.5 ಲಕ್ಷ ಚಾಲಕರು ಸೇವಾಸಿಂಧು ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, 40 ಸಾವಿರ ಚಾಲಕರಿಗೆ ಮಾತ್ರ ಹಣ ಕೈಸೇರಿದೆ. ಪರಿಹಾರದ ಹಣ ಚಾಲಕರಿಗೆ ಸಿಗ ಬಾರದು ಎಂದು ಸರ್ಕಾರ ಕುತಂತ್ರ ನಡೆ ಸಿದೆ’ ಎಂದು ಎಎಪಿ ಆಟೊ ಘಟಕದ ಅಧ್ಯಕ್ಷ ಅಯೂಬ್ ಖಾನ್ ದೂರಿದರು.
ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಪೀಸ್ ಆಟೊ ಚಾಲಕರ ಸಂಘಟನೆಯ ರಘು ನಾರಾಯಣ ಗೌಡ, ಆದರ್ಶ ಆಟೊ ಸಂಘಟನೆಯ ಸಂಪತ್, ರಾಜೀವ್ ಗಾಂಧಿ ಆಟೊ ಸಂಘಟನೆಯ ಬಿ.ಚಂದ್ರಶೇಖರ್, ಜಯ ಕರ್ನಾಟಕ ಸಂಘಟನೆಯ ಆನಂದ್ ಸೇರಿದಂತೆ ವಿವಿಧ ಆಟೊ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.