ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಯ ಆರೋಪಿ ಮೊಹಮ್ಮದ್ ಜಮೀಲ್ಗೆ ಹೈಕೋರ್ಟ್ ಜಾಮೀನು ನೀಡಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬೆಂಬಲಿಗರೊಬ್ಬರ ಹೇಳಿಕೆ ಆಧರಿಸಿ ಎಳನೀರು ವ್ಯಾಪಾರಿ ಜಮೀಲ್ ಅವರನ್ನು ಪೊಲೀಸರು 2020 ಆಗಸ್ಟ್ 19ರಂದು ಬಂಧಿಸಿದ್ದರು.
ಫೇಸ್ಬುಕ್ ಸಂದೇಶದಿಂದ ಪ್ರಚೋದನೆಗೊಂಡು ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಗುಂಪು ಬೆಂಕಿ ಹಚ್ಚಿತ್ತು. ಹಿಂಸಾಚಾರ ಪ್ರಕರಣದಲ್ಲಿ ಜಮೀಲ್ 29ನೇ ಆರೋಪಿ ಎಂದು ಹೆಸರಿಸಲಾಗಿತ್ತು.
ಜಾಮೀನು ಕೋರಿ ಜಮೀಲ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿತ್ತು. ಬಳಿಕ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅರ್ಜಿ ವಿಚಾರಣೆ ನಡೆಸಿದರು.
ಶಾಸಕರ ಮನೆಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಜಮೀಲ್ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ. ಸಿಸಿಟಿವಿ ಕ್ಯಾಮೆರಾ ದೃಶ್ಯ ಮತ್ತು ವಿಡಿಯೊ ತುಣುಕುಗಳಲ್ಲೂ ಜಮೀಲ್ ಕಾಣಿಸುತ್ತಿಲ್ಲ ಎಂಬುದನ್ನು ಪೀಠ ಗಮನಿಸಿತು.
ಜಾಮೀನು ಮಂಜೂರು ಮಾಡಿದ ಪೀಠ, ₹1 ಲಕ್ಷ ಮೌಲ್ಯದ ಬಾಂಡ್ ಜೊತೆಗೆ ಇಬ್ಬರ ಶ್ಯೂರಿಟಿ ನೀಡಬೇಕು. ಅಗತ್ಯವಿದ್ದಾಗ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿತು.