ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ: ಶಂಕರನ ಜಪ, ರಾತ್ರಿಯಿಡೀ ಜಾಗರಣೆ

ದೇಗುಲಗಳಲ್ಲಿ ಶಿವನ ದರ್ಶನ ಪಡೆದ ಭಕ್ತರು: ವಿಶೇಷ ಪುಷ್ಪಲಿಂಗ ಪ್ರತಿಷ್ಠಾಪನೆ l ಪ್ರಮುಖ ದೇವಾಲಯಗಳಲ್ಲಿ ನಾಟಕ, ಸಂ
Last Updated 19 ಫೆಬ್ರುವರಿ 2023, 4:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.

ಬೆಳಿಗ್ಗೆಯಿಂದಲೂ ಶಿವನ ದೇವಾಲಯಗಳತ್ತ ಭಕ್ತರ ದಂಡು ಹರಿದುಬಂದಿತ್ತು. ಭಕ್ತರು ಶಿವನಧ್ಯಾನ ದಲ್ಲಿ ಮುಳುಗಿದ್ದರು. ಬಗೆಬಗೆಯ ಪುಷ್ಪಗಳಿಂದ ಅಲಂಕೃತಗೊಂಡಿದ್ದ ದೇವಾಲಯಗಳು ಕಂಗೊಳಿಸಿದವು.

ವಿಶೇಷ ಪೂಜೆ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿಗಳು ನೆರವೇರಿದವು. ‘ಓಂ ನಮಃ ಶಿವಾಯ’ ಎಂದು ಭಕ್ತರು ಜಪಿಸಿದರು.

ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಚಂದ್ರಚೂಡೇಶ್ವರ ದೇವಸ್ಥಾನ, ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನ, ಮುರುಗೇಶ ಪಾಳ್ಯದ ಶಿವೋಹಂ ಶಿವ ದೇವಸ್ಥಾನ, ಕೋಟೆ ಜಲಕಂಠೇಶ್ವರ ದೇವಸ್ಥಾನಗಳೂ ಸೇರಿ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಭಕ್ತರು ಶ್ರದ್ಧೆಯಿಂದ ದೇವಸ್ಥಾನಗಳಿಗೆ ಬಂದು ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಕೆಲವು ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸರದಿಯಲ್ಲಿ ನಿಂತ ಭಕ್ತರು ಪ್ರಸಾದ ಸೇವಿಸಿದರು. ದೇಗುಲಗಳಲ್ಲಿ ದರ್ಶನಕ್ಕೆ ನೂಕುನುಗ್ಗಲು ಸಹ ಇತ್ತು.

ಕಾಡುಮಲ್ಲೇಶ್ವರದಲ್ಲಿ ಸಡಗರ: ನಗರದ ಪುರಾತನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಸೋಮವಾರದ ವರೆಗೂ ಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಭಾನುವಾರ ಮಲ್ಲೇಶ್ವರದ
ವಿವಿಧ ಭಾಗಗಳಲ್ಲಿ ಬ್ರಹ್ಮ ರಥೋತ್ಸವ ಸಂಚರಿಸಲಿದೆ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದಲ್ಲಿ ಪುಷ್ಪಗಳಲ್ಲಿ 22 ಅಡಿ ಉದ್ದ, ಅಷ್ಟೇ ಅಗಲದ ವಿಶೇಷ ಪುಷ್ಪಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ನಾಟಕೋತ್ಸವ: ಪ್ರಮುಖ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಗಳು ನಡೆದವು. ರಾತ್ರಿ ಜಾಗರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಾಗರಣೆ ಅಂಗವಾಗಿ ನಾಟಕೋತ್ಸವ, ಸಂಗೀತೋತ್ಸವ, ಕಾವ್ಯೋತ್ಸವ ಆಯೋಜಿಸಲಾಗಿತ್ತು. ದೀಪೋತ್ಸವ ವಿಶೇಷ ಮೆರುಗು ನೀಡಿತು. ಕತ್ತಲು ಆವರಿಸುತ್ತಿದ್ದಂತೆ ಶಿವನ ಆರಾಧನೆಯ ತಾಣಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸಿದವು. ತಳಿರು–ತೋರಣಗಳು ಮಹಾಶಿವರಾತ್ರಿ ಮೆರುಗು ಹೆಚ್ಚಿಸಿದವು.

ಸರ್ಜಾಪುರ ರಸ್ತೆಯ ಅಗರದ ಡಾ.ರಾಜ್‌ಕುಮಾರ್‌ ಕಲಾಭಿಮಾನಿಗಳ ಸಾಂಸ್ಕೃತಿಕ ವೇದಿಕೆಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಪ್ಯಾಲೆಸ್‌ ಗುಟ್ಟಹಳ್ಳಿಯಲ್ಲಿ ಶನಿದೇವರ ದೇವಸ್ಥಾನದಲ್ಲಿ ಸಂಜೆ 6.30ರಿಂದ ಭಜನಾ ಕಾರ್ಯಕ್ರಮಗಳು ನಡೆದವು. ನೂರಾರು ಮಂದಿ ಪಾಲ್ಗೊಂಡಿದ್ದರು.

ಬಸವನಗುಡಿಯ ಹನುಮಂತನಗರದ ಶೇಷ ಮಹಾಬಲಮುರಿ ಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮವಿತ್ತು. ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಚಿಮಣಿ ಹಿಲ್ಸ್‌ನ ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆಯಿಂದ ಶಿವರಾತ್ರಿ ಸ್ವರ ಸಂಭ್ರಮ ನಡೆಯಿತು. ಶಂಕರನಗರದ ಬಲಮುರಿ ಸಿದ್ದಿವಿನಾಯಕ ದೇವಾಲಯದಲ್ಲಿ ಶಿವರಾತ್ರಿ ಸಂಗೀತೋತ್ಸವ ನಡೆಯಿತು.

ರಾತ್ರಿಯಿಡೀ ‘ಕಾವ್ಯ ಶಿವರಾತ್ರಿ’

ಎನ್‌.ಆರ್‌.ಕಾಲೊನಿಯ ಸಿ.ಅಶ್ವತ್ಥ್‌ ಕಲಾಭವನದಲ್ಲಿ ಜನಸಂಸ್ಕೃತಿ ಪ್ರತಿಷ್ಠಾನ ಕಾವ್ಯ ಮಂಡಲದಿಂದ ಕಾವ್ಯ ಶಿವರಾತ್ರಿ ಆಯೋಜಿಸ
ಲಾಗಿತ್ತು. ಅಹೋರಾತ್ರಿ ಕಾವ್ಯ ಗಾಯನ ನಡೆಯಿತು. ಅದಾದ ಮೇಲೆ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಮಹಾಕಾವ್ಯಗಳ ಗಾಯನ ನಡೆಯಿತು.

ಸ್ವಾತಂತ್ರ್ಯ ಉದ್ಯಾನದಲ್ಲಿ ಜಾಗರಣೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅದೇ ಸ್ಥಳದಲ್ಲಿ
ಪ್ರತಿಭಟನಕಾರರು ಜಾಗರಣೆ ನಡೆಸಿದರು.

ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಆ ಸ್ಥಳದಲ್ಲಿ ಹೋರಾಟಗಾರರೊಂದಿಗೆ ಜಾಗರಣೆ ನಡೆಸಿದರು. ಸಾಮೂಹಿಕ ಇಷ್ಟಲಿಂಗ ಪೂಜೆಯ ಮೂಲಕ ಶಿವರಾತ್ರಿ ಆಚರಿಸಿದರು.

ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ದಿನಗೂಲಿ ನೌಕರರು ಅದೇ ಸ್ಥಳದಲ್ಲಿ ಶಿವರಾತ್ರಿ ಆಚರಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಈಶ್ವರನ ಧ್ಯಾನ

ಕೆಂಗೇರಿ: ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಬನಶಂಕರಿ 6ನೇ ಹಂತದ ನಿವಾಸಿಗಳು ಘಟಕದ ಎದುರು ಜಾಗರಣೆ ನಡೆಸಿದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಧರಣಿ ಸ್ಥಳದತ್ತ ಸುಳಿಯಲಿಲ್ಲ.

ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸ್ಥಳೀಯ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಭೇಟಿ ನೀಡಿದರೂ ಸ್ಥಳೀಯ ನಿವಾಸಿಗಳ ಮನವೊಲಿಸಲು ಸಾಧ್ಯವಾಗಿರಲಿಲ್ಲ. ಭರವಸೆಯಿಂದ ಬೇಸತ್ತ ನಾಗರಿಕರು ಹಬ್ಬದ ದಿನದಂದೂ ಪ್ರತಿಭಟನೆ ನಡೆಸಿದರು. 200ಕ್ಕೂ ಹೆಚ್ಚಿನ ನಿವಾಸಿಗಳು ಘಟಕದ ಎದುರು ಮುಂದೆ ಪೆಂಡಾಲ್ ಅಳವಡಿಸಿ ಅಲ್ಲಿಯೇ ಜಾಗರಣೆ
ಮಾಡಿದರು. ಶಿವನ ಮೂರ್ತಿಗೆ ಪೂಜೆ ಸಲ್ಲಿಸಿದರು.

ಸಮಸ್ಯೆಯ ತೀವ್ರತೆ ಅಧಿಕಾರಿ ಗಳಿಗೆ ಅರ್ಥವಾಗುತ್ತಿಲ್ಲ. ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಇತ್ಯರ್ಥವಾಗದಿದ್ದರೆ ಹೋರಾಟದ ದಿಕ್ಕನ್ನು ಬದಲಾಯಿಸಲಾಗುವುದು ಎಂದು ನಿವಾಸಿಗಳ ಸಂಘದ ಅಧ್ಯಕ್ಷ ಮಹೇಶ್ ಅವರು
ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT