ಬೆಂಗಳೂರು: ಹಾಸಿಗೆ ಬ್ಲಾಕಿಂಗ್ ಜಾಲದ ತನಿಖೆ ನಡೆಸುತ್ತಿರುವ ಪೊಲೀಸರ ತಂಡದಲ್ಲಿ ಸೈಬರ್ ತಜ್ಞರು ಇದ್ದಾರೆಯೇ ಎಂಬುದನ್ನು ಖಚಿತಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋವಿಡ್ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ತನಿಖೆಯ ಸ್ಥಿತಿಗತಿ ಕುರಿತ ವರದಿ ಸಲ್ಲಿಸುವಂತೆ ಸಿಸಿಬಿ ಜಂಟಿ ಕಮಿಷನರ್ಗೆ ಸೂಚನೆ ನೀಡಿತು.
‘ಆರೋಪಗಳ ಸೂಕ್ಷ್ಮ ಸ್ವರೂಪವನ್ನು ಗಮನಿಸಿದರೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತನಿಖೆಯ ಮೇಲ್ವಿಚಾರಣೆ ವಹಿಸುವುದು ಅವಶ್ಯಕ. ಸೈಬರ್ ಕ್ಷೇತ್ರದಲ್ಲಿ ಪರಿಣಿತಿ ಇರುವ ಅಧಿಕಾರಿಗಳನ್ನು ತನಿಖಾ ತಂಡದಲ್ಲಿ ಒಳಗೊಳ್ಳುವುದೂ ಅಗತ್ಯ’ ಎಂದು ಪೀಠ ಹೇಳಿತು.
‘ಈಗಾಗಲೇ ತಂಡ ರಚನೆ ಮಾಡಲಾಗಿದೆ. ಜಂಟಿ ಕಮಿಷನರ್ (ಅಪರಾಧ) ಸಂದೀಪ್ ಪಾಟೀಲ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಅಡ್ವೊಕೇಟ್ ಜನರಲ್ ಪೀಠಕ್ಕೆ ಮಹಿತಿ ನೀಡಿದರು.
ಅಮಾನತುಗೊಂಡಿರುವ ಬಿಬಿಎಂಪಿ ವಾರ್ ರೂಂ ಉದ್ಯೋಗಿಗಳಿಗೆ ಅನ್ಯಾಯವಾಗಿದೆ ಎಂಬ ಯುವ ಕಾಂಗ್ರೆಸ್ ಮುಖಂಡ ವೈ.ಬಿ. ಶ್ರೀವತ್ಸ ಅವರ ಅರ್ಜಿಯನ್ನು ಪುರಸ್ಕರಿಸಲು ಪೀಠ ನಿರಾಕರಿಸಿತು.