ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಖಾತಾ ಮೇಳಕ್ಕೆ ಚಾಲನೆ

Last Updated 3 ಫೆಬ್ರುವರಿ 2023, 23:53 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮೂರು ದಿನಗಳ ‘ಖಾತಾ ಮೇಳ’ಕ್ಕೆ ವಲಯ ಆಯುಕ್ತ ಜಯರಾಮ್‌ ರಾಯಪುರ ಶುಕ್ರವಾರ ಚಾಲನೆ ನೀಡಿದರು.

ಬಿಟಿಎಂ ಲೇಔಟ್ 2ನೇ ಹಂತದ ಬಳಿಯಿರುವ ಗ್ರೀನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಮೇಳಕ್ಕೆ ಚಾಲನೆ ನೀಡಲಾಯಿತು.

‘ಪಾಲಿಕೆಯಿಂದ ಆಸ್ತಿ ತೆರಿಗೆ ಹಾಗೂ ಖಾತೆ ಮಾಡಿಕೊಡುವ ವಿಚಾರದಲ್ಲಿ ನಾಗರಿಕರಲ್ಲಿ ಅಸಮಾಧಾನಗಳಿದ್ಧು, ‌ಆ ಬಗ್ಗೆ ದೂರುಗಳು ಕೇಳಿಬರುತ್ತವೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಫೆ.5ರವರೆಗೆ ಖಾತಾ ಮೇಳ ಆಯೋಜಿಸಲಾಗಿದೆ’ ಎಂದರು.

ಸಕಾಲ ತಂತ್ರಾಂಶದಲ್ಲಿ ಖಾತಾಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಎಲ್ಲಾ ಚಟುವಟಿಕೆಗಳು ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ದಕ್ಷಿಣ ವಲಯದಲ್ಲಿ 317 ಖಾತಾಗೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದವು. ಖಾತಾ ಮೇಳ ಮಾಡುತ್ತೇವೆ ಎಂಬ ವಿಷಯ ತಿಳಿದ ಬಳಿಕ 317 ಅರ್ಜಿಗಳ ಪೈಕಿ 250 ಬಾಕಿ ಇವೆ. ಈ 3 ದಿನಗಳಲ್ಲಿ ಇನ್ನುಳಿದ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇಳದಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು ಎಂದು ಜಯರಾಮ್‌ ಹೇಳಿದರು.

ಗ್ರೀನ್ ಸಿಟಿ ಅಪಾರ್ಟ್‌ಮೆಂಟ್ ಗೇಟ್ ಬಳಿ ಕಸ ಹಾಕುವುದು ಹಾಗೂ ಮೂತ್ರ ವಿಸರ್ಜನೆ ಮಾಡುವುದು, ಬಿಟಿಎಂ 2ನೇ ಹಂತದ ರಸ್ತೆ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಗಳನ್ನು ಒತ್ತುವರಿ ಮಾಡಿಕೊಂಡಿರುವುದು ಹಾಗೂ ವಾಹನಗಳು ಪಾರ್ಕಿಂಗ್ ಮಾಡಿರುವುದರಿಂದ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗಲಿದೆ ಹಾಗೂ ಬೀದಿ ದೀಪಗಳು ಇಲ್ಲಿದಿರುವ ಕಡೆ ಸರಿಪಡಿಸಲು ನಾಗರಿಕರು ಮನವಿ ಮಾಡಿದರು.

‘ನಗರದಲ್ಲಿ ಎಲ್ಲೂ ಕಸದ ಬ್ಲ್ಯಾಕ್ ಸ್ಪಾಟ್ ಇಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರೀನ್ ಸಿಟಿ ಅಪಾರ್ಟ್‌ಮೆಂಟ್ ಬಳಿ ಕಸ ಹಾಕುವ ವಿಚಾರವಾಗಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ವ್ಯಾಪಾರ ಮಾಡಲು ಹಾಕಿಂಗ್ ಝೋನ್ ಮಾಡಬೇಕಿದ್ದು, ಅದಕ್ಕೆ ಸೂಕ್ತ ಸ್ಥಳದ ಅವಶ್ಯಕತೆಯಿದೆ. ಇನ್ನು ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಜಯರಾಮ್‌ ಹೇಳಿದರು.

ಉಪ ಆಯುಕ್ತರಾದ ಲಕ್ಷ್ಮೀದೇವಿ, ಕಂದಾಯ ಅಧಿಕಾರಿ ವರಲಕ್ಷ್ಮೀ, ಸಹಾಯಕ ಕಂದಾಯ ಅಧಿಕಾರಿ ಪುರುಷೋತ್ತಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT