ಗಾಂಧಿನಗರ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿದ್ದಾಗ ಸಿದ್ದೇಗೌಡ ಅವರು ಕಾಮಗಾರಿಗಳ ಟೆಂಡರ್ ಕರೆಯುವಾಗ ಅಕ್ರಮ ನಡೆಸಿದ ಗುರುತರ ಆರೋಪ ಹೊತ್ತಿದ್ದರು. ಗಾಂಧಿನಗರ, ಆರ್.ಆರ್.ನಗರ ಹಾಗೂ ಮಲ್ಲೇಶ್ವರ ಉಪವಿಭಾಗಗಳಲ್ಲಿ ಅನುಷ್ಠಾನವಾಗಿದ್ದ ಕಾಮಗಾರಿಗಳ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ನ್ಯಾ.ಎಚ್.ಎನ್.ನಾಗಮೋಹನದಾಸ್ ನೇತೃತ್ವದ ತನಿಖಾ ಸಮಿತಿ ವಿಚಾರಣೆಯಲ್ಲೂಅವರು ನಡೆಸಿದ್ದ ಅಕ್ರಮಗಳು ಸಾಬೀತಾಗಿದ್ದವು. ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ್ದ ಸಮಿತಿಯು ಹಿಂಬಡ್ತಿ ನೀಡುವಂತೆಯೂ ಶಿಫಾರಸು ಮಾಡಿತ್ತು. ಆದರೆ, ಬಿಬಿಎಂಪಿ ಅವರಿಗೆ ಹಿಂಬಡ್ತಿ ನೀಡಿರಲಿಲ್ಲ. ಅದರ ಬದಲು ಪ್ರಧಾನ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯನಗರದ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್.ಅಮರೇಶ್ ಅವರು 2021ರ ಮೇ 17ರಂದು ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು. ಬಳಿಕ ನಗರಾಭಿವೃದ್ಧಿ ಇಲಾಖೆಯು ಅವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿದೆ.