ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BBMP ಪುನರ್‌‌ರಚನೆ: ತಲಾ 75 ವಾರ್ಡ್‌ಗಳ 3 ಪಾಲಿಕೆ ರಚನೆಗೆ ತಜ್ಞರ ಸಮಿತಿ ಸಲಹೆ

Published 25 ಮೇ 2024, 0:19 IST
Last Updated 25 ಮೇ 2024, 0:19 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಚುನಾವಣೆ ನಡೆಯಬಹುದು ಎಂಬ ವಿಷಯ ಚರ್ಚೆ ಬರುತ್ತಿರುವ ಸಂದರ್ಭದಲ್ಲೇ ಬಿಬಿಎಂಪಿ ಪುನರ್‌ರಚನೆ ಕುರಿತ ಮಾತು ಮುನ್ನೆಲೆಗೆ ಬಂದಿದೆ.

ಬಿಬಿಎಂಪಿ ಪುನರ್‌ರಚನೆ ಕುರಿತು ವರದಿ ಸಲ್ಲಿಸಲು ರಚಿಸಲಾಗಿರುವ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ತಜ್ಞರ ಸಮಿತಿಯ ಸದಸ್ಯರೊಂದಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉ‍ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಚರ್ಚೆ ನಡೆಸಿದರು.

‘ಬಿಬಿಎಂಪಿಯನ್ನು ಮೂರು ಭಾಗಗಳನ್ನಾಗಿಸಿ, ತಲಾ 75 ವಾರ್ಡ್‌ಗಳಿಗೆ ಒಂದು ಪಾಲಿಕೆಯನ್ನಾಗಿಸಬೇಕು. ಇದರಿಂದ ಆಡಳಿತ ಹಾಗೂ ಕಾಮಗಾರಿಗಳ ಮೇಲೆ ನಿಯಂತ್ರಣ ಸಾಧಿಸಬಹುದು. ಮೂರೂ ಪಾಲಿಕೆ ಜೊತೆಗೆ ಜಲಮಂಡಳಿ, ಬೆಸ್ಕಾಂ, ಬಿಡಿಎ ಹಾಗೂ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ಒಂದು ಸಂಸ್ಥೆಯಡಿ ತಂದು, ಅದನ್ನು ‘ಗ್ರೇಟರ್‌ ಬೆಂಗಳೂರು’ ಎಂದು ಹೆಸರಿಸಬೇಕು. ಅದರಲ್ಲಿ ಹಿರಿಯ ಅಧಿಕಾರಿಗಳನ್ನು ನೇಮಿಸಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂಬ ಸಲಹೆಗಳು ಬಂದಿವೆ. ಇಂತಹ ಸಲಹೆಗಳನ್ನು ಒಳಗೊಂಡ ವರದಿಯನ್ನು ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ತಜ್ಞರ ಸಮಿತಿ ವರದಿ ನೀಡಲಿದೆ’ ಎಂದು ಮೂಲಗಳು ತಿಳಿಸಿವೆ.

2014ರಲ್ಲಿ ಬಿಬಿಎಂಪಿ ವಿಭಜಿಸಲು ವರದಿ ನೀಡಲು ರಚಿಸಲಾಗಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ ನೇತೃತ್ವದ ‘ತಜ್ಞರ ಸಮಿತಿ’ಯನ್ನೇ 2023ರ ಜೂನ್‌ 12ರಂದು ಪುನರ್‌–ರಚಿಸಲಾಗಿತ್ತು. 2023ರ ಜುಲೈ 18ರಂದು ಮತ್ತೊಮ್ಮೆ ಈ ಸಮಿತಿಯನ್ನು ಪುನರ್‌ ರಚಿಸಿದ್ದು, ಬಿಬಿಎಂಪಿ– ಬಿಡಿಎ ಆಯುಕ್ತರಾಗಿದ್ದ ಸಿದ್ದಯ್ಯ ಮತ್ತು ಹಿಂದಿನ ಬೆಂಗಳೂರು ಅಜೆಂಡಾ ಕಾರ್ಯಪಡೆಯ ಸದಸ್ಯ ರವಿಚಂದರ್‌ ಅವರ ಜೊತೆಗೆ ರಾಜ್ಯಸಭೆ ಮಾಜಿ ಸದಸ್ಯ ಎಂ.ವಿ. ರಾಜೀವ್‌ಗೌಡ ಸದಸ್ಯರಾಗಿದ್ದಾರೆ.

ಉತ್ತಮ ‘ಬ್ರ್ಯಾಂಡ್‌–ಬೆಂಗಳೂರು’ ಮತ್ತು ಜಾಗತಿಕ ನಗರವನ್ನಾಗಿ ಮಾಡಲು ಅಧ್ಯಯನ ವರದಿಯನ್ನು ಸಲ್ಲಿಸಲು ಕೂಡ ಈ ‘ತಜ್ಞರ ಸಮಿತಿ’ಗೆ ಸೂಚಿಸಲಾಗಿತ್ತು. ಆದರೆ, ಬಿಬಿಎಂಪಿಯನ್ನು ಮೂರು ಭಾಗವಾಗಿಸುವುದೇ ಪ್ರಥಮ ಆದ್ಯತೆ ಈ ಸಮಿತಿಯದ್ದಾಗಿದೆ.

ಸಮಿತಿ ರಚನೆಯಾದ ಮೇಲೆ, 243 ವಾರ್ಡ್‌ಗಳನ್ನು 225 ವಾರ್ಡ್‌ಗಳನ್ನಾಗಿ ಪುನರ್‌ ರಚನೆ ಮಾಡಲಾಯಿತು. ಇದಕ್ಕೆ ಮೀಸಲಾತಿಯನ್ನು ನಿಗದಿಪಡಿಸಿ, ಡಿಸೆಂಬರ್‌ನೊಳಗೆ ಚುನಾವಣೆ ನಡೆಸುವುದಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರೂ ಹೇಳಿದ್ದರು. ಆದರೆ, ಮೀಸಲಾತಿ ವರದಿಯಲ್ಲಿನ ಗೊಂದಲದಿಂದ ವಾರ್ಡ್‌ ಮೀಸಲು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸಬೂಬು ನೀಡಲಾಯಿತು. ಮೀಸಲು ಹಾಗೂ ವಾರ್ಡ್‌ ರಚನೆ ಬಗ್ಗೆ ನ್ಯಾಯಾಲಯದಲ್ಲೂ ಪ್ರಕರಣವಿದೆ.

ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ತಜ್ಞರ ಸಮಿತಿಯ ಸದಸ್ಯರಾದ ಸಿದ್ದಯ್ಯ, ರವಿಚಂದರ್, ನಗರಾಭಿವೃದ್ಧಿ ಇಲಾಖೆ ಹಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಭಾಗವಹಿಸಿದ್ದರು.

ಬಿಡಿಎ ಸಭೆ: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊಸ ಬಡಾವಣೆಗಳ ನಿರ್ಮಾಣ ಹಾಗೂ ಹೊರವಲಯದಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ನಿರ್ಮಾಣ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಮುಖ್ಯ ಆಯುಕ್ತರಿಗೆ ಡಿಸಿಎಂ ಪತ್ರ

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಖಾತರಿಪಡಿಸಿಕೊಂಡು ನಂತರ ಕುಡಿಯಲು ಸರಬರಾಜು ಮಾಡಬೇಕು. ಈ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಇದೇ ರೀತಿಯ ಪತ್ರವನ್ನು ಬೆಂಗಳೂರು ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ಜಲಮಂಡಳಿ ಅಧ್ಯಕ್ಷರಿಗೂ ಬರೆದಿದ್ದು ನೀರಿನ ಗುಣಮಟ್ಟವನ್ನು ಖಾತರಿಪಡಿಸಿಕೊಂಡು ಸರಬರಾಜು ಮಾಡಲು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT