ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BDA Peripheral Ring Road: ಪರಿಹಾರ ಹೆಚ್ಚು ಕೊಡಿ; ಇಲ್ಲ ಎನ್‌ಒಸಿ ಕೊಡಲು ಆಗ್ರಹ

ಬಿಡಿಎ ಪೆರಿಫೆರಲ್‌ ವರ್ತುಲ ರಸ್ತೆ: ಸ್ವಾಧೀನಗೊಂಡ ಭೂಮಿ ಮಾಲೀಕರ ಒಕ್ಕೊರಲ ಆಗ್ರಹ
Published 1 ಆಗಸ್ಟ್ 2023, 0:12 IST
Last Updated 1 ಆಗಸ್ಟ್ 2023, 0:12 IST
ಅಕ್ಷರ ಗಾತ್ರ

ಬೆಂಗಳೂರು: ‘18 ವರ್ಷಗಳಿಂದ ಬದುಕು ನರಕವಾಗಿದೆ. ಇರುವ ಭೂಮಿಗೆ ಪರಿಹಾರ ಸಿಕ್ಕಿಲ್ಲ, ಕಷ್ಟಕ್ಕೂ ಮಾರಾಟ ಮಾಡಲು ಆಗುತ್ತಿಲ್ಲ. ಅಪ್ಪನ ಕಾಲದಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆಯಾದರೂ ಇನ್ನೂ ಏನೂ ಸಿಕ್ಕಿಲ್ಲ. ನಮಗೆ ನಿಮ್ಮ ರಸ್ತೆ ಬೇಡ, ಬ್ರಿಟಿಷರ ಕಾಲದ ನಿಮ್ಮ ಬಿಡಿಗಾಸಿನ ಪರಿಹಾರವೂ ಬೇಡ. 2013ರಂತೆ ಹೆಚ್ಚಿನ ಪರಿಹಾರಕೊಡಿ. ಇಲ್ಲದಿದ್ದರೆ ಭೂಮಿ ನಮಗೆ ಬಿಟ್ಟುಬಿಡಿ, ಎನ್‌ಒಸಿ ಕೊಡಿ, ನಮ್ಮ ಜೀವನ ನಾವು ನೋಡಿಕೊಳ್ಳುತ್ತೇವೆ...’

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಬಿಡಿಎ ಸೋಮವಾರ ಆಯೋಜಿಸಿದ್ದ ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗೆ ಸ್ವಾಧೀನಗೊಂಡ ಭೂ ಮಾಲೀಕರು ಹಾಗೂ ರೈತರ ಜೊತೆಗಿನ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಇವು.

‘ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಉನ್ನತ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ನಮ್ಮ ಬಳಿ ಹಣವಿಲ್ಲ. ನಮ್ಮ ಪರವಾಗಿ ಸರ್ಕಾರವೇ ನ್ಯಾಯಾಲಯದಲ್ಲಿ ಅರ್ಜಿ ಹಾಕಬೇಕು. ಇಲ್ಲದಿದ್ದರೆ 2013ರಲ್ಲಿ ಜಾರಿಗೆ ತಂದ ಕಾಯ್ದೆಯಂತೆ ಪರಿಹಾರ ನೀಡಿ. ಬಿಡಿಎ ಕಾಯ್ದೆಯಂತೆ ಪರಿಹಾರ ನೀಡಬೇಕು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕರಣದಲ್ಲಿ ಸರ್ಕಾರ ಹಾಗೂ ಬಿಡಿಎ ಮಾತ್ರ ಪಾರ್ಟಿಗಳು. ರೈತರು ಅಲ್ಲಿರಲಿಲ್ಲ’ ಎಂದು ರೈತರು ದೂರಿದರು.

‘ರಸ್ತೆಗೆ ಜಮೀನು ಸ್ವಾಧೀನ ಆಗಿದ್ದು 2-3 ಗುಂಟೆ ಜಮೀನು ಮಾತ್ರ ಉಳಿದಿದೆ. ಇದನ್ನು ಭೂ ಪರಿವರ್ತನೆ ಮಾಡಲು ಅರ್ಜಿ ಹಾಕಿದರೂ ಸಾಧ್ಯವಾಗುತ್ತಿಲ್ಲ. ನಮಗೆ ಹಳೆ ಪರಿಹಾರಕ್ಕಿಂತ ಅದೇ ಗ್ರಾಮದಲ್ಲಿ ಬದಲು ಜಮೀನು ಕೊಡಿಸಿ. ಈ ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ನಮಗೆ ಸುತ್ತಮುತ್ತ ಹಳ್ಳಿಗಳಲ್ಲಿರುವ ಸರ್ಕಾರಿ ಜಮೀನನ್ನು ಬದಲಿಯಾಗಿ ನೀಡಿ. ಆಗ ನಾವು ಅಲ್ಲೇ ವ್ಯವಸಾಯ ಮಾಡಿಕೊಂಡು ಹೋಗುತ್ತೇವೆ’ ಎಂದು ನಾಗೇನಹಳ್ಳಿ, ಹನುಮಸಾಗರ, ಹೊಸಕೋಟೆಯ ಭೂಮಾಲೀಕರು ಹೇಳಿದರು.

ಯೋಜನೆ ನಿಲ್ಲಿಸುವುದಿಲ್ಲ: ಡಿಸಿಎಂ

‘ನಾನು ಸ್ವಾಧೀನ ಆಗಿರುವ ಭೂಮಿ ಡಿನೋಟಿಫೈ ಮಾಡೊಲ್ಲ. ಎನ್ಒಸಿ ನೀಡಲು ಸಾಧ್ಯವಿಲ್ಲ. ನಾನು ಈ ಯೋಜನೆ ನಿಲ್ಲಿಸುವುದಿಲ್ಲ. ಅದನ್ನು ನೇರವಾಗಿ ನಿಮಗೆ ಸ್ಪಷ್ಟಪಡಿಸುತ್ತೇನೆ. ಆದರೆ ಯಾವ ರೀತಿ ನಿಮ್ಮ ಹಿತ ಕಾಯಬೇಕು ಯಾವ ರೀತಿ ನಿಮಗೆ ಹೆಚ್ಚಿನ ಅನುಕೂಲ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ರಸ್ತೆಯೂ ಆಗಬೇಕು ನಿಮಗೂ ನ್ಯಾಯ ಒದಗಿಸಬೇಕು ಎಂಬುದು ನನ್ನ ಉದ್ದೇಶ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ‘ಕಾಲಮಿತಿಯಲ್ಲಿ ಯೋಜನೆ ಜಾರಿ ಪರ್ಯಾಯ ಭೂಮಿ ಹಂಚಿಕೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಎನ್‌ಒಸಿ ನೀಡಬೇಕು ಬದಲಿ ನಿವೇಶನ ನೀಡುವ ಬಗ್ಗೆ ಸಲಹೆ ನೀಡಿದ್ದೀರಿ. ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಈ ವಿಚಾರವಾಗಿ ತೀರ್ಮಾನ ಮಾಡಲಾಗುತ್ತದೆ’ ಎಂದರು. ‘ಪೆರಿಫೆರಲ್ ವರ್ತುಲ ರಸ್ತೆ ಯೋಜನೆ  ಭೂಸ್ವಾಧಿನಕ್ಕೆ 2007ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆಗೆ 25 ಸಾವಿರ ಕೋಟಿ ಅಗತ್ಯವಿದೆ. ಆಗಲೇ ಈ ರಸ್ತೆ ನಿರ್ಮಾಣವಾಗಿದ್ದರೆ ಇಷ್ಟು ಹೊರೆ ಆಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಬಿಡಿಎಗೆ ಹೊಸ ಭೂಸ್ವಾಧೀನ ಕಾನೂನು ಅನ್ವಯ ಆಗುವುದಿಲ್ಲ. ನಮ್ಮ ಸರ್ಕಾರ ಹೊಸ ಭೂಮಿಗೆ ಅಧಿಸೂಚನೆ ಹೊರಡಿಸುವ ಪರಿಸ್ಥಿತಿಯಲ್ಲಿ ಇಲ್ಲ.  ‌ನಾವು ಈ ಯೋಜನೆಯನ್ನು ಮುಂದಕ್ಕೆ ತಳ್ಳಿಕೊಂಡು ಹೋಗಲು ಆಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಭೂ ಮಾಲೀಕರು ಹೀಗೆಂದರು...

* ಮನೆಯಲ್ಲಿ ನನ್ನ ಫೋಟೊ ಹಾಕುವ ಮುನ್ನ ಪರಿಹಾರ ಕೊಡಿ ಇಲ್ಲವೇ ಜಮೀನು ಬಿಟ್ಟಬಿಡಿ

* ಬೆಂಗಳೂರು ನಗರಕ್ಕೆ ಅನುಕೂಲವಾಗುತ್ತದೆ ಉದ್ಯಮಿಗಳಿಗೆ ಪ್ರಯೋಜನ ಅನ್ನುತ್ತೀರಿ... ರೈತರಿಗೆ ಏನು ಪ್ರಯೋಜನೆ ಹೇಳಿ...?

* ಎರಡು–ಮೂರು ವರ್ಷಕ್ಕೊಮ್ಮೆ ಅಲೈನ್‌ಮೆಂಟ್‌ ಬದಲಾಯಿಸುತ್ತಿದ್ದಾರೆ. ಬಿಲ್ಡರ್‌ಗಳಿಗೆ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

* ಪಿಆರ್‌ಆರ್ ಅಂದರೆ ಪೊಲಿಟಿಸಿಯನ್‌ ರಿಕ್ವೈರ್ಡ್‌ ರೋಡ್‌. ರಾಜಕಾರಣಿಗಳಿಗಾಗಿ ಮಾತ್ರ.

* ಪರಿಹಾರಕ್ಕೆ ಬಿಡಿಎ ಕಾನೂನು ಎನ್ನುತ್ತೀರಿ... 5 ವರ್ಷ ಯೋಜನೆ ಆರಂಭವಾಗದಿದ್ದರೆ ಭೂಸ್ವಾಧೀನ ರದ್ದಾಗುತ್ತದೆ ಎಂದು ಅದೇ ಕಾನೂನಿನಲ್ಲಿದೆ. ನಿಮಗೆ ಬೇಕಾದ್ದನ್ನು ಮಾತ್ರ ಪರಿಗಣಿಸುತ್ತೀರಾ?

* ಭೂಸ್ವಾಧೀನವಾದಾಗ ತಂದೆಗೆ 60 ವರ್ಷ ಇದೀಗ 76 ವರ್ಷ. ಅವರಿಗೆ ಬರಲು ಸಾಧ್ಯವಾಗುತ್ತಿಲ್ಲ. ಮಗಳಾಗಿ ನಾನು ಬಂದಿದ್ದೇನೆ. ಸ್ವಾಧೀನಪಡಿಸಿಕೊಂಡ ಮನೆಗೆ ಬದಲಿ ಮನೆ ನೀಡಿ.

* ನೈಸ್‌ ರಸ್ತೆಗೆ ಲಿಂಕ್‌ ಮಾಡಲು ಪಕ್ಕದಲ್ಲೇ ಸರ್ಕಾರಿ ಜಾಗ ಗೋಮಾಳ ಇದೆ. ಅದನ್ನು ಬಿಟ್ಟು 300 ಮನೆ ಕೆಡವಲು ನೋಟಿಫೈ ಮಾಡಿದ್ದಾರೆ. 

* ನಗರದ ಸಂಚಾರ ಸಮಸ್ಯೆಗೆ ಫ್ಲೈಓವರ್‌ ಮಾಡಿ ಸುರಂಗ ಮಾರ್ಗ ಮಾಡಿ ರೈತರನ್ನು ಬಿಟ್ಟುಬಿಡಿ ಸ್ವಾಮಿ

* ದೇವರಿಗೆ ನಾವು ಕೈ ಮುಗಿಯುವುದಿಲ್ಲ ಹಾಳಾಗಿ ಹೋಗಿದ್ದೇವೆ. ನೀವೆಲ್ಲ ದೇವರಂತೆ ಕುಳಿತಿದ್ದೀರಿ ಕೈ ಮುಗಿದು ಕೇಳುತ್ತೇವೆ ನ್ಯಾಯ ಕೊಡಿಸಿ.

* ಸಚಿವರೇ ನೀವೆಲ್ಲ ಅಲ್ಲಿ ಕುಳಿತಿದ್ದೀರಲ್ಲ. ನಮಗೆ ಕೊಡುವುದಾಗಿ ಹೇಳುತ್ತಿರುವ ಪರಿಹಾರ ನಿಮಗೆ ನ್ಯಾಯ ಅನ್ನಿಸುತ್ತಾ? ಹೇಳಿ ನೋಡೋಣ...

* ಪಿಆರ್‌ಆರ್ ಹತ್ತಿರವೇ ಹಲವು ರಸ್ತೆಗಳಿವೆ. ಇದರ ಅಗತ್ಯ ಇದೆಯಾ? ಪರ್ಯಾಯ ರಸ್ತೆಗಳೇ ಸಾಕಲ್ಲವೇ? ಅಧಿಕಾರಿಗಳು ಎಂಜಿನಿಯರ್‌ಗಳು ಓದಿದ್ದವರು ಅವರಿಗೆ ಗೊತ್ತಾಗುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT