ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿಕೆ

ಮತ್ತೆ 554 ನಿವಾಸಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ ಬಿಬಿಎಂಪಿ
Last Updated 23 ಫೆಬ್ರುವರಿ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ಎಸ್‌ಜೆಆರ್‌ ವಾಟರ್‌ಮಾರ್ಕ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳಲ್ಲಿ ಕೋವಿಡ್‌ ಪತ್ತೆಯಾದವರ ಸಂಖ್ಯೆ 20ಕ್ಕೆ ಹೆಚ್ಚಳವಾಗಿದೆ.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳಲ್ಲಿ 10 ಮಂದಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿತ್ತು. ಹಾಗಾಗಿ501 ನಿವಾಸಿಗಳನ್ನು ಬಿಬಿಎಂಪಿ ಸೋಮವಾರ ಕೋವಿಡ್‌ ಪರೀಕ್ಷೆಗೆ ಒಳಪಡಿಸಿತ್ತು. ಅವರಲ್ಲಿ 10 ಮಂದಿ ಸೋಂಕು ಹೊಂದಿರುವುದು ಮಂಗಳವಾರ ಪತ್ತೆಯಾಗಿದೆ. ಹಾಗಾಗಿ ಮತ್ತೆ ಇಲ್ಲಿನ 554 ನಿವಾಸಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಒಂಬತ್ತು ಬ್ಲಾಕ್‌ಗಳಿದ್ದು, ಒಟ್ಟು 504 ವಸತಿಗಳಿವೆ. ಇವುಗಳಲ್ಲಿ 470 ಫ್ಲ್ಯಾಟ್‌ಗಳಲ್ಲಿ ಕುಟುಂಬಗಳು ವಾಸ ಇವೆ. ಆರು ಬ್ಲಾಕ್‌ಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಈ ಆರು ಬ್ಲಾಕ್‌ಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ನಿವಾಸಿಗಳ ಗಂಟಲು ದ್ರವದ ಮಾದರಿ ಪಡೆಯಲು ಬಿಬಿಎಂಪಿ 9 ತಂಡಗಳನ್ನು ನಿಯೋಜಿಸಿದೆ.

‘ಒಂದೇ ಕ್ಲಸ್ಟರ್‌ನಲ್ಲಿ ಐದಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾದರೆ ಅದನ್ನು ಕಂಟೈನ್‌ಮೆಂಟ್ ಪ್ರದೇಶ ಎಂದು ಗುರುತಿಸುತ್ತೇವೆ. ಅದರೆ, ಹಿಂದಿನಂತೆ ಅಲ್ಲಿ ಬ್ಯಾರಿಕೇಡ್‌ ಅಳವಡಿಸುವುದಿಲ್ಲ. ಭಿತ್ತಿಪತ್ರಗಳನ್ನು ಅಂಟಿಸುವುದಿಲ್ಲ. ಸೋಂಕಿತರಲ್ಲಿ ರೋಗ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ. ರೋಗ ಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಲು ಅವಕಾಶ ಕಲ್ಪಿಸಲಾಗುತ್ತದೆ’ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸೋಂಕು ಹೊಂದಿರುವವರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನೂ ಪತ್ತೆ ಹಚ್ಚಿ ಅವರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಪರೀಕ್ಷೆಯ ಫಲಿತಾಂಶ ಬರುವವರೆಗೆ ಅವರು ಹೊರಗಡೆ ಅಡ್ಡಾಡದಂತೆ ಸೂಚನೆ ನೀಡುತ್ತೇವೆ. ಅವರ ಮೇಲೂ ನಿಗಾ ಇಡುತ್ತೇವೆ’ ಎಂದರು.

ಬೆಳ್ಳಂದೂರಿನಲ್ಲಿ ಸೋಂಕು ಪತ್ತೆಯಾದವರು ಕೇರಳ ಅಥವಾ ಮಹಾರಾಷ್ಟ್ರದಿಂದ ಬಂದವರಲ್ಲ ಎಂದು ಬಿಬಿಎಂಪಿ ಹೇಳಿದೆ.

ಸೋಂಕು ನಿಯಂತ್ರಣಕ್ಕೆ– ಅಧಿಕಾರಿಗಳ ನಿಟ್ಟುಸಿರು

ಈ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪತ್ತೆಯಾದ ಎರಡು ಪ್ರಕರಣಗಳಲ್ಲೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿರುವುದು ಬಿಬಿಎಂಪಿ ಅಧಿಕಾರಿಗಳು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಾವಲ್‌ಬೈರಸಂದ್ರದ ನರ್ಸಿಂಗ್‌ ಕಾಲೇಜಿನಲ್ಲಿ 40 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು ಹಾಗೂ ಬೊಮ್ಮನಹಳ್ಳಿ ವಲಯದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ 103 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು.

‘ಕಾವಲ್‌ಭೈರಸಂದ್ರದ ಕಾಲೇಜಿನ ಬೇರೆ ವಿದ್ಯಾರ್ಥಿಗಳಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲೂ ಬಳಿಕ ಯಾವುದೇ ವ್ಯಕ್ತಿಗಳಲ್ಲೂ ಸೊಂಕು ಕಂಡುಬಂದಿಲ್ಲ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT