ಬೆಂಗಳೂರು: ಐತಿಹಾಸಿಕ ‘ಬೆಂಗಳೂರು ಕರಗ’ ಈ ಬಾರಿಯೂ ಕೊರೊನಾ ಕಾರಣದಿಂದ ಸರಳವಾಗಿ ಮಂಗಳವಾರ ಮಧ್ಯರಾತ್ರಿ ನೆರವೇರಿತು.
ನಗರದಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಬೆಂಗಳೂರು ‘ಕರಗ ಶಕ್ತ್ಯೋತ್ಸವ’ವನ್ನು ರದ್ದುಪಡಿಸಿ, ಬೆಂಗಳೂರು ನಗರ ಜಿಲ್ಲಾಧಿಕಾರಿಜೆ.ಮಂಜುನಾಥ್ ಆದೇಶ ಹೊರಡಿಸಿದ್ದರು. ಇದರಿಂದ ಸಾಂಕೇತಿಕವಾಗಿ ದೇವಸ್ಥಾನದ ಮಟ್ಟಿಗೆ ಕರಗ ಆಚರಿಸಲು ಆಡಳಿತ ಮಂಡಳಿ ಮುಂದಾಗಿತ್ತು.
‘ದೇವಸ್ಥಾನದಲ್ಲೇ ಸರಳವಾಗಿ ಕರಗ ನಡೆಸಲು ನಿರ್ಧರಿಸಲಾಯಿತು. ಸಂಪ್ರದಾಯದಂತೆ ಕರಗದ ಮುನ್ನಾ ದಿನಗಳಲ್ಲಿ ನಡೆಯುವಧ್ವಜಾರೋಹಣ, ಹಸಿಕರಗ ಹಾಗೂ ಪೂಜಾ ಕೈಂಕರ್ಯಗಳೂ ಅತಿ ಸರಳವಾಗಿ ನೆರವೇರಿತು’ ಎಂದು ತಿಗಳ ಸಮುದಾಯದ ಮುಖಂಡರಾದವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ತಿಳಿಸಿದರು.
‘ಕರಗಕ್ಕೆ ಜೊತೆಯಾಗುತ್ತಿದ್ದ ವೀರಕುಮಾರರ ಗುಂಪಿಗೂ ತಡೆ ನೀಡಲಾಗಿತ್ತು. ನಗರದ ರಸ್ತೆಗಳಲ್ಲಿ ಕರಗ ಸಂಚರಿಸಲಿಲ್ಲ. ಹೆಚ್ಚು ಜನ ಸೇರದಂತೆ ಭಕ್ತರಲ್ಲೂ ಮನವಿ ಮಾಡಲಾಗಿತ್ತು. ಸರ್ಕಾರವೂ ದೇವಸ್ಥಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿತ್ತು. ಕೆಲವೇ ಮಂದಿಯ ಸಮ್ಮುಖದಲ್ಲಿ ಹೂವಿನ ಕರಗ ನಡೆಯಿತು. ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕುವ ಮೂಲಕ ಕರಗ ಸಂಪನ್ನಗೊಂಡಿತು’ ಎಂದು ಮಾಹಿತಿ ನೀಡಿದರು.