ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ನಡೆಸುವ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ನಡೆಸುತ್ತಿರುವುದಕ್ಕೆ ಆಮ್ ಆದ್ಮಿ ಪಕ್ಷ(ಎಎಪಿ) ಖಂಡಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ರಮೇಶ್ ಬೆಲ್ಲಂಕೊಂಡ, ‘ಕೇಂದ್ರ ಸರ್ಕಾರ ಕನ್ನಡಿಗರು ಸೇರಿ ಇತರೆ ಸ್ಥಳೀಯ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ’ ಎಂದು ದೂರಿದರು.
‘ದೇಶದಲ್ಲಿ 89 ಕೋಟಿ ಹಿಂದಿಯೇತರರಿದ್ದಾರೆ. ಅವರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ. ಸಂಸ್ಕೃತ ಭಾಷೆಯಲ್ಲಿ ಬ್ಯಾಂಕ್ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗಿದೆ. ಆದರೆ, ಕನ್ನಡಕ್ಕೆ ಅವಕಾಶ ನೀಡದೇ ಇರುವುದು ಹಿಂದಿ ಹೇರಿಕೆಯ ಪ್ರತೀಕ’ ಎಂದು ಹೇಳಿದರು.