ಬೆಂಗಳೂರು: ಜಯನಗರ ಅಶೋಕ ಸ್ತಂಭದ ಬಳಿ ಕಾರು ಹಾಗೂ ಬಿಎಂಡಬ್ಲ್ಯು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಶೇಖ್ ನೌಶೀರ್ ಅಹಮ್ಮದ್ (34) ಮೃತಪಟ್ಟಿದ್ದಾರೆ.
‘ಡೇರಿ ವೃತ್ತದ ನಿವಾಸಿ ಶೇಖ್ ನೌಶೀರ್ ಅಹಮ್ಮದ್, ಹಳೇ ಬೈಕ್ ಮಾರಾಟದ ಡೀಲರ್ ಆಗಿದ್ದರು. ಬಿಎಂಡಬ್ಲ್ಯು ಬೈಕ್ ಖರೀದಿಸಲು ಮುಂದಾಗಿದ್ದ ಅವರು, ಅತೀ ವೇಗದಲ್ಲಿ ಟೆಸ್ಟ್ ಡ್ರೈವ್ ಮಾಡುವ ವೇಳೆ ಈ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಸ್ಥಳೀಯ ನಿವಾಸಿ ಮುದಾಸೀರ್, ತಮ್ಮ ಬಿಎಂಡಬ್ಲ್ಯು ಬೈಕ್ ಮಾರಾಟಕ್ಕೆ ಇರಿಸಿದ್ದರು. ಬೈಕ್ ಪರಿಶೀಲಿಸಲೆಂದು ನೌಶೀರ್ ಬುಧವಾರ ರಾತ್ರಿ ಮುದಾಸೀರ್ ಬಳಿ ಬಂದಿದ್ದರು. ಬೈಕ್ ಚಲಾಯಿಸಿಕೊಂಡು ಮಾಧವನ್ ಪಾರ್ಕ್ ಕಡೆಯಿಂದ ಅಶೋಕ ಸ್ತಂಭದ ಕಡೆಗೆ ಹೊರಟಿದ್ದರು. ಅತೀ ವೇಗದಲ್ಲಿ ಬೈಕ್ ಚಲಾಯಿಸಿದ್ದರು. ಹಿಂಬದಿಯಲ್ಲಿ ಮುದಾಸೀರ್ ಕುಳಿತಿದ್ದರು.’
‘ಕನಕಪಾಳ್ಯ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ನೌಶೀರ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮುದಾಸೀರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ಲಕ್ಷ್ಯದ ಚಾಲನೆ ಆರೋಪದಡಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.