ಬೆಂಗಳೂರು: ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿದ ಕ್ರಮವನ್ನು ಸ್ವಾಗತಿಸಿ ರಾಜ್ಯದಲ್ಲಿ ಎರಡು ದಿನ ವಿಜಯೋತ್ಸವ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಗ್ರಾಮಗಳು ಮತ್ತು ಬೂತ್ ಮಟ್ಟದಲ್ಲಿ ವಿಜಯೋತ್ಸವ ನಡೆಯಲಿದೆ ಎಂದು ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಜನತೆಗೆ ಕಾಶ್ಮೀರದ ಸಮಸ್ಯೆಯನ್ನು ತಿಳಿಸುವುದರ ಜತೆಗೆ, 370 ನೇ ವಿಧಿಯನ್ನು ತೆಗೆದು ಹಾಕಿದ್ದರಿಂದ ಅಲ್ಲಿನ ಜನರಿಗೆ ಆಗುವ ಪ್ರಯೋಜನಗಳ ಬಗ್ಗೆಯೂ ತಿಳಿಸುವ ಕೆಲಸ ಆಗಲಿದೆ. ದೇಶ ಮುನ್ನಡೆಗೆ ಇದೊಂದು ದಿಟ್ಟ ಹೆಜ್ಜೆಯಾಗಿದೆ ಎಂದು ರವಿಕುಮಾರ್ ಹೇಳಿದರು.