ಬೆಂಗಳೂರು: ‘ಬೌನ್ಸ್’ ಕಂಪನಿಯ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.
‘ಕೆ.ಆರ್.ಪುರದ ಶ್ರೀನಿವಾಸ್ ಲೇಔಟ್ ನಿವಾಸಿ ಲೀಲಾವತಿ ಹೆಬ್ಬಾರ್ ಎಂಬುವರ 40 ಗ್ರಾಂ ತೂಕದ ಸರವನ್ನು ಕದ್ದೊಯ್ಯಲಾಗಿದ್ದು, ಈ ಸಂಬಂಧ ಪತಿ ಸುಬ್ರಹ್ಮಣ್ಯ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕೆ.ಆರ್.ಪುರ ಪೊಲೀಸರು ಹೇಳಿದರು.
‘ಇದೇ 10ರಂದು ಬೆಳಿಗ್ಗೆ 11.45ರ ಸುಮಾರಿಗೆ ಲೀಲಾವತಿ ಅವರು ಮನೆಯಿಂದ ಹೊರಗಡೆ ಬಂದಿದ್ದರು. ಅದೇ ಸಂದರ್ಭದಲ್ಲೇ ಬೌನ್ಸ್ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದ ದುಷ್ಕರ್ಮಿಗಳು, ಲೀಲಾವತಿ ಅವರ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಅದು ವಿಫಲವಾಗಿತ್ತು.’
‘ಲೀಲಾವತಿ ಸಹಾಯಕ್ಕಾಗಿ ಕೂಗಾಡುತ್ತಿದ್ದಾಗಲೇ ಆರೋಪಿಗಳು ಅವರ ತಲೆಗೆ ಹೊಡೆದಿದ್ದರು. ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದು ಬೀಳುತ್ತಿದ್ದಂತೆ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.