ಬೆಂಗಳೂರು: ನಗರದ ಪಾದರಾಯನಪುರದ ಒಂದನೇ ಅಡ್ಡರಸ್ತೆಯಲ್ಲಿರುವ ಸುಬಾನಿಯ ಮಸೀದಿಯಲ್ಲಿ ನೆಲೆಸಿದ್ದ ತಬ್ಲೀಗಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೊರ ದೇಶದ ತಬ್ಲೀಗಿಗಳು ಜ. 5ರಂದು ಪ್ರವಾಸ ವೀಸಾದಡಿ ಭಾರತಕ್ಕೆ ಬಂದಿದ್ದರು. ಹಲವು ಧಾರ್ಮಿಕ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ, ಬೆಂಗಳೂರಿಗೆ ಬಂದು ಪಾದರಾಯನಪುರ ಸುಬಾನಿಯ ಮಸೀದಿಯಲ್ಲಿ ಉಳಿದುಕೊಂಡಿದ್ದರು. ಸ್ಥಳೀಯ ಉಮರ್ ಇ ಫಾರೂಕಿಯಾ ಟ್ರಸ್ಟ್ ವತಿಯಿಂದ ಧರ್ಮ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದರು.
‘ಕಿರ್ಗಿಸ್ಥಾನದ ಪ್ರಜೆ ದೊಸಲಿವ್ ಕಲ್ಯಾಬೆಕ್ ಸೇರಿ 19 ಮಂದಿ ವಿದೇಶಿ ತಬ್ಲೀಗಿಗಳು ಇದ್ದರು. ಅವರಲ್ಲಿ ಕೊರೊನಾ ಸೋಂಕು ಇರುವ ಅನುಮಾನವಿತ್ತು. ಹೀಗಾಗಿ ಕ್ವಾರಂಟೈನ್ ಮಾಡಲಾಗಿತ್ತು. ಇಂದಿರಾನಗರದ ಆಸ್ಪತ್ರೆಯಲ್ಲಿಟ್ಟು ನಂತರ, ಸಾರಾಯಿಪಾಳ್ಯದ ಹಜ್ ಭವನಕ್ಕೆ ಬಿಡಲಾಗಿತ್ತು. ಈಗ ಅವರೆಲ್ಲರ ವಿರುದ್ಧ ವಿದೇಶಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ಎಂದು ಪೊಲೀಸರು ಹೇಳಿದರು.