ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತೀಯ ಗಲಭೆಗೆ ಸಂಚು ವಿಫಲಗೊಳಿಸಿದ ಸಿಸಿಬಿ

ಪ್ರಜಾವಾಣಿ ವಾರ್ತೆ
Last Updated 11 ಜನವರಿ 2020, 22:43 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಶಂಕಿತ ಉಗ್ರರ ಗುಂಪು ರೂಪಿಸಿದ್ದ ಸಂಚನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ವಿಫಲಗೊಳಿಸಿದ್ದಾರೆ.

ಆಂತರಿಕ ಭದ್ರತಾ ವಿಭಾಗ ಹಾಗೂ ಗುಪ್ತದಳದ ಜತೆಗೂಡಿ ಸಿಸಿಬಿ ಪೊಲೀಸರು ನಡೆಸಿದ ತನಿಖೆಯ ವೇಳೆ ನಿಷೇಧಿತ ಉಗ್ರ ಸಂಘಟನೆ ಅಲ್‌ ಉಮ್ಮಾದ ಮಾಜಿ ಸದಸ್ಯ ಮೆಹಬೂಬ್‌ ಪಾಷಾ ಅವರ ಸುದ್ದಗುಂಟೆ ಪಾಳ್ಯದ ಮನೆಯಲ್ಲಿ ಶಂಕಿತರು ಸಭೆ ಸೇರಿದ್ದನ್ನು ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಸಿಸಿಬಿ ಪೊಲೀಸರು ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪಾಷಾ ಮತ್ತು ಆತನ 14 ಸಹಚರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಪಾಷಾ ಅವಿತುಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಪತ್ತೆಗೆ ಶುಕ್ರವಾರ ರಾತ್ರಿವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸುದ್ದಗುಂಟೆ ಪಾಳ್ಯದಲ್ಲಿ ಜ.7ರಂದು ಬಂಧಿತರಾದ ಮೂವರು ಶಂಕಿತರು ಸದಸ್ಯರಾಗಿರುವ ಅನಾಮಧೇಯ ತಂಡದಲ್ಲಿ ಪಾಷಾ ಕೂಡಾ ಸದಸ್ಯನಾಗಿದ್ದಾನೆ. ಈ ತಂಡ ವಿದೇಶಿ ಮೂಲದ ಉಗ್ರನೊಬ್ಬನ ಜೊತೆ ಸಂಪರ್ಕ ಹೊಂದಿದ್ದು, ಆತನ ನಿರ್ದೇಶನದಂತೆ ಗಲಭೆ ಸೃಷ್ಟಿಸಲು ಉದ್ದೇಶಿಸಿತ್ತು ಎಂದು ಸಿಸಿಬಿ ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ ತಿಳಿಸಿದರು.

ವಾಹನ ಚಾಲನೆ ಹಾಗೂ ಮರಗೆಲಸ ಮಾಡುವ ಪಾಷಾ ನಗರದಲ್ಲಿ ನೆಲೆಸಿದ್ದಾನೆ. ಈತನ ಮನೆಯಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದ ತಂಡದ ಸದಸ್ಯರು ತಮ್ಮ ಧರ್ಮಗಳನ್ನು ವಿರೋಧಿಸುವ ಬೇರೆ ಸಮುದಾಯದ ಜನರನ್ನು ಕೊಲ್ಲಲು ಉದ್ದೇಶಿಸಿದ್ದರು. ವಿವೇಕನಗರದಲ್ಲಿರುವ ಇನ್ನೊಂದು ಮನೆಯಲ್ಲೂ ಇವರು ಆಗಾಗ್ಗೆ ಸಭೆ ಸೇರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT