ಬೆಂಗಳೂರು: ವಿಶಿಷ್ಟ ಪರಿಕಲ್ಪನೆಗಳ ಮೂಲಕ ನವೋದ್ಯಮ ಕನಸು ಕಾಣುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ 19 ಯುವ ಪ್ರತಿಭಾವಂತರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಯ್ಕೆಯಾದ ಎಲ್ಲರಿಗೂ ಸರ್ಕಾರದ ‘ಎಲಿವೇಟ್ ಉನ್ನತಿ–2020’ ಯೋಜನೆ ಅಡಿ ಪ್ರಶಸ್ತಿ ಮತ್ತು ₹1.42 ಕೋಟಿ ಆರ್ಥಿಕ ನೆರವಿನ ಚೆಕ್ ವಿತರಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಎಲ್ಲರನ್ನೂ ಗೌರವಿಸಿದರು.
ಪರಿಶಿಷ್ಟ ಜಾತಿಯ 14 ಮತ್ತು ಪರಿಶಿಷ್ಟ ವರ್ಗದ ಐವರು ಪ್ರತಿಭಾನ್ವಿತರಿಗೆ ಅಶ್ವತ್ಥನಾರಾಯಣ ಆರ್ಥಿಕ ನೆರವು ವಿತರಿಸಿದರು. ಈ ನೆರವು ಕನಿಷ್ಠ ₹10 ಲಕ್ಷದಿಂದ ಗರಿಷ್ಠ ₹30 ಲಕ್ಷದವರೆಗೆ ಇರಲಿದೆ. ಸಮಾಜ ಕಲ್ಯಾಣ ಇಲಾಖೆ ಈ ನೆರವು ನೀಡಲಿದೆ. ಒಟ್ಟು ₹2.85 ಕೋಟಿಯಲ್ಲಿ ಈಗ ಅರ್ಧದಷ್ಟು ಕೊಟ್ಟಿದ್ದು, ಉಳಿದ ಹಣವನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದರು.
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನವೋದ್ಯಮ ಆರಂಭಿಸುತ್ತಿರುವ ಬೀದರ್ನ ಅಗಾರಿಕಸ್ ಸಲ್ಯೂಶನ್ಸ್ ಕಂಪನಿಗೆ ಗರಿಷ್ಠ ₹30 ಲಕ್ಷ ನೆರವು ನೀಡಲಾಯಿತು. ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಬೆಂಗಳೂರಿನ ಕಾರ್ಬನ್ ಹಬ್ಸ್, ಬೆಂಗಳೂರಿನ ಝೀವಾ, ರಾಮನಗರದ ವಿನಾಯಕ ಎಂಟರ್ಪ್ರೈಸಸ್ಗೆ ತಲಾ ₹20 ಲಕ್ಷ ಚೆಕ್ ವಿತರಿಸಲಾಯಿತು.
ಇಎಸ್ಡಿಎಂ ಕ್ಷೇತ್ರದಲ್ಲಿ ತೊಡಗಿರುವ ಮೈಸೂರಿನ ಆಲ್ಟಿವ್ಯೂಸ್ ಏರೋಸ್ಪೇಸ್, ಐಒಟಿ-ಐಟಿ-ಐಟಿಇಎಸ್ ವಿಭಾಗದ ಬೆಂಗಳೂರಿನ ಎಕ್ಸಾಪೆಂಟ್ ಎಂಜಿನಿಯರಿಂಗ್, ಐಟಿ-ಇಎಸ್ ವಿಭಾಗದಲ್ಲಿನ ಬೆಂಗಳೂರಿನ ವೆಜಲೈಸ್ ಪ್ಲ್ಯಾನ್ಸ್ಗೆ ತಲಾ ₹17 ಲಕ್ಷ ನೆರವು ನೀಡಲಾಯಿತು.
ಇಎಸ್ಡಿಎಂ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಎಲೆ ಪೋಯೇಬಿ, ಹುಬ್ಬಳ್ಳಿ ಧಾರವಾಡದ ಕಂಪ್ಲೆಮ್ ಟೆಕ್, ಬೆಂಗಳೂರಿನ ಇಮೇಜ್ ಫ್ರೇಮ್ಸ್, ಮೈಸೂರಿನ ವಿರೂಬಿ ಟೆಕ್ನಾಲಜಿಸ್ಗೆ ತಲಾ ₹ 16 ಲಕ್ಷ ನೆರವು ನೀಡಲಾಯಿತು.
ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ತೊಡಗಿರುವ ಬೆಂಗಳೂರಿನ ಎಂವಿಎಸ್ ಟೆಕ್ನೋ ಸೆಲ್ಯೂಶನ್ಸ್, ಇಎಸ್ಡಿಎಂ ವಿಭಾಗದಲ್ಲಿನ ಬೆಂಗಳೂರು ನಗರದ ಅನಂತ ಎನರ್ಜಿ ಸಿಸ್ಟಮ್ಸ್, ಐಒಟಿ-ಐಟಿ-ಐಟಿಇಎಸ್ ವಿಭಾಗದಲ್ಲಿ ಬೆಂಗಳೂರಿನ ಪ್ರೋಟಾಸೆಲ್ ಸೆಲ್ಯೂಶನ್ಸ್, ಐಟಿ-ಐಟಿಇಎಸ್ ಕ್ಷೇತ್ರದ ಬೆಂಗಳೂರಿನ ದಿನ್ ಅರ್ಮಾನಿಯಾ, ಐಟಿ-ಐಟಿಇಎಸ್ ವಿಭಾಗದಲ್ಲಿ ಕಲಬುರಗಿಯ ಎಲಿಕ್ಸ್ ಟೆಕ್ನೋಕ್ರಾಫ್ಟ್, ಐಟಿ-ಐಟಿಎಸ್ದಲ್ಲಿ ಬೆಂಗಳೂರಿನ ನನ್ ಸೆಲೆನೆ, ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಮೈಸೂರಿನ ಇಂಡೀಬೀನ್ ಸ್ಪೆಶಾಲಿಟಿ ಕಾಫ್ ಪ್ರೈವೇಟ್ ಲಿಮಿಟೆಡ್, ಎಸ್ಡಿಎಂ ಕ್ಷೇತ್ರದಲ್ಲಿ ಮೈಸೂರಿನ ಸ್ಪಾಟ್ ಅಂಡ್ ವ್ಯೂ ಟೆಕ್ ಸೆಲ್ಯೂಶನ್ಸ್ಗೆ ತಲಾ ₹10 ಲಕ್ಷಗಳ ಚೆಕ್ಗಳನ್ನು ಉಪ ಮುಖ್ಯಮಂತ್ರಿ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.