ಬೆಂಗಳೂರು: ಚಿಕ್ಕಪೇಟೆಯಲ್ಲಿ ಸೀರೆ ಖರೀದಿಗೆ ಬಂದಿದ್ದ ವೃದ್ಧರೊಬ್ಬರನ್ನು ಸುತ್ತುವರೆದು ಬೆದರಿಸಿದ್ದ ನಾಲ್ವರು ದುಷ್ಕರ್ಮಿಗಳು, ₹ 1.25 ಲಕ್ಷ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಟಿ. ದಾಸರಹಳ್ಳಿ ನಿವಾಸಿಯಾದ 62 ವರ್ಷದ ವೃದ್ಧ ಸುಲಿಗೆ ಬಗ್ಗೆ ದೂರು ನೀಡಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪತ್ನಿ, ಮಗ, ಸೊಸೆ ಜೊತೆಯಲ್ಲಿ ಸೀರೆ ಖರೀದಿಸಲೆಂದು ಅ. 16ರಂದು ವೃದ್ಧ ಚಿಕ್ಕಪೇಟೆಗೆ ಬಂದಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಚಿಕ್ಕಪೇಟೆಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಪತ್ನಿ, ಮಗ ಹಾಗೂ ಸೊಸೆ ಸ್ವಲ್ಪ ದೂರದಲ್ಲಿದ್ದರು.’
‘ವೃದ್ಧನನ್ನು ಅಡ್ಡಗಟ್ಟಿದ್ದ ನಾಲ್ವರು, ಸುತ್ತುವರೆದು ನಿಂತಿದ್ದರು. ಅತ್ತಿತ್ತ ಅಲುಗಾಡಲು ಸಹ ವೃದ್ಧನಿಗೆ ಸಾಧ್ಯವಾಗಿರಲಿಲ್ಲ. ವೃದ್ಧನ ಜೇಬಿಗೆ ಕೈ ಹಾಕಿದ್ದ ಆರೋಪಿ, ₹ 1.25 ಲಕ್ಷ ತೆಗೆದುಕೊಂಡಿದ್ದ. ನಂತರ, ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದೂ ತಿಳಿಸಿದರು.
‘ವೃದ್ಧನನ್ನು ಹಿಂಬಾಲಿಸಿ ಆರೋಪಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ. ದುಷ್ಕರ್ಮಿಗಳ ಪತ್ತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ಹೇಳಿದರು.