ಯಲಹಂಕ:ಚಿಕ್ಕಜಾಲದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕೊಳಚೆನೀರು ಶುದ್ಧೀಕರಣ ಘಟಕವನ್ನು (ಎಸ್ಟಿಪಿ) ಶಾಸಕ ಕೃಷ್ಣಬೈರೇಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಗ್ರಾಮಪಂಚಾಯ್ತಿ ಪ್ರದೇಶವಾದರೂ ಚಿಕ್ಕಜಾಲದಲ್ಲಿ ಜನಸಂಖ್ಯೆಯು ನಗರದ ರೀತಿಯಲ್ಲಿಯೇ ವೇಗವಾಗಿ ಬೆಳೆಯುತ್ತಿದೆ. ಅಂತರರಾಷ್ಟ್ರೀಯ ವಿಮಾನನಿಲ್ದಾಣವೂ ಸಮೀಪವಿದೆ. ಈ ದಿಸೆಯಲ್ಲಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಕೊಳವೆಮಾರ್ಗಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸಿದರು.
‘ಐದು ಲಕ್ಷ ಲೀಟರ್ ಸಾಮರ್ಥ್ಯದ ಈ ಎಸ್ಟಿಪಿಗೆ ಪ್ರಾಯೋಗಿಕವಾಗಿ ಈಗ ಚಾಲನೆ ನೀಡಲಾಗಿದೆ.ಎರಡು ವಾರ ಪರೀಕ್ಷಿಸಿದ ನಂತರ ಗ್ರಾಮದ ಪ್ರತಿ ಮನೆಯಿಂದ ಒಳಚರಂಡಿ ನೀರು ಹರಿದುಹೋಗಲು ಸಂಪರ್ಕ ನೀಡಲಾಗುವುದು. ನಂತರ ಆ ನೀರನ್ನು ಎಸ್ಟಿಪಿಯಲ್ಲಿ ಶುದ್ಧೀಕರಿಸಲಾಗುವುದು’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಪತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಉದಯಶಂಕರ್, ಕಾಂಗ್ರೆಸ್ ಮುಖಂಡರಾದ ಕೆ.ಅಶೋಕನ್, ಎಂ.ಜಯಗೋಪಾಲಗೌಡ ಮತ್ತಿತರರು ಉಪಸ್ಥಿತರಿದ್ದರು.
ಹೈಟೆಕ್ ಈಜುಕೊಳ:
ಗ್ರಾಮಪಂಚಾಯ್ತಿ ಮಟ್ಟದಲ್ಲಿ ಹೈಟೆಕ್ ಈಜುಕೊಳ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಮಾಡಿದ ರಾಜ್ಯದ ಮೊದಲ ಗ್ರಾಮಪಂಚಾಯ್ತಿ ಎಂಬ ಕೀರ್ತಿಗೆ ದೊಡ್ಡಜಾಲ ಗ್ರಾಮ ಪಂಚಾಯ್ತಿ ಪಾತ್ರವಾಗಿದೆ.
ನವರತ್ನ ಅಗ್ರಹಾರ ಗ್ರಾಮದಲ್ಲಿ ₹1.25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಈಜುಕೊಳ, ಒಳಾಂಗಣ ಬ್ಯಾಡ್ಮಿಂಟನ್ ಕೋಟರ್್ ಹಾಗೂ ತೆರೆದ ಜಿಮ್ಗೆ ಶಾಸಕ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.
ಎರಡು ಬಸ್ ತಂಗುದಾಣ ಹಾಗೂ ಬೋವಿಪಾಳ್ಯದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು,‘ಈ ಭಾಗದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆರೋಗ್ಯವಾಗಿರಬೇಕಾದರೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದುದು ಅತ್ಯಗತ್ಯ. ಈ ದಿಸೆಯಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲಾಗಿದೆ' ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಮಾತನಾಡಿ, ‘ದೊಡ್ಡಜಾಲ ಗ್ರಾಮಪಂಚಾಯ್ತಿ ವತಿಯಿಂದ ಈಗಾಗಲೇ ರಿಯಾಯಿತಿ ದರದ ‘ನಮ್ಮ ಮೆಡಿಕಲ್’ ಸ್ಟೋರ್, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ‘ವೈಫೈ ಗ್ರಾಮ’ ಸೇರಿದಂತೆ ಹಲವು ಸೌಲಭ್ಯ ಒದಗಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.