ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದ ಗಾಳಿ ಗುಣಮಟ್ಟ ಕುಸಿತ, ವಾತಾವರಣದಲ್ಲಿ ತೇವಾಂಶ ಹೆಚ್ಚಳ

ನಗರದ ವಿವಿಧೆಡೆ 100ರ ಗಡಿ ದಾಟಿದ ಎಕ್ಯುಐ
Last Updated 26 ನವೆಂಬರ್ 2022, 1:48 IST
ಅಕ್ಷರ ಗಾತ್ರ

ಬೆಂಗಳೂರು: ಹವಾಮಾನ ವೈಪರೀತ್ಯ ಹಾಗೂ ವಾತಾವರಣದಲ್ಲಿ ತೇವಾಂಶ ಹೆಚ್ಚಳದಿಂದ ದೂಳಿನ ಕಣಗಳು ತಳಮಟ್ಟದಲ್ಲಿಯೇ ಉಳಿಯುತ್ತಿವೆ. ಇದರಿಂದಾಗಿಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ತಿಂಗಳಿನಿಂದ ಏರುಗತಿ ಪಡೆದಿದೆ. ನಗರದ ವಿವಿಧೆಡೆ ಎಕ್ಯುಐ 100ರ ಗಡಿ ದಾಟಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರವಾಗಿದ್ದು, ಅಲ್ಲಿ ಎಕ್ಯುಐ 300ರ ಗಡಿ ದಾಟಿದೆ. ಕೆಲವೆಡೆ ಕಳಪೆ ಹಂತಕ್ಕೆ ತಲುಪಿದರೆ, ಇನ್ನು ಕೆಲವೆಡೆ ಪರಿಸ್ಥಿತಿ ಇನ್ನಷ್ಟು ಕೆಟ್ಟ ಸ್ಥಿತಿಗೆ ತಲುಪಿದೆ. ಇಲ್ಲಿಯೂ ತಾಪಮಾನ ಇಳಿಕೆಯಿಂದಾಗಿ ಗಾಳಿಯ ಮುಟ್ಟವು ಉತ್ತಮ ಹಂತದಿಂದ ಸಮಾಧಾನಕಾರ ಹಾಗೂ ಮಧ್ಯಮ ಹಂತ ತಲುಪಿದೆ.

ವಾರದಿಂದ ತಾಪಮಾನದಲ್ಲಿ ಏರಿಳಿತವಾಗುತ್ತಿದೆ.ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗುತ್ತಿದೆ. ಇದರಿಂದಾಗಿ ದೂಳಿನ ಕಣಗಳನ್ನು ಗಾಳಿ ಹಿಡಿದಿಟ್ಟುಕೊಳ್ಳುತ್ತಿದೆ.ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ವ್ಯತ್ಯಾಸವಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ವಾತಾವರಣ ಹದಗೆಡುತ್ತಿದೆ. ಗಾಳಿಯಲ್ಲಿನ ದೂಳಿನ ಕಣಗಳು ಉಸಿರಾಟದ ತೊಂದರೆಯಂತಹ ಅನಾರೋಗ್ಯ ಸಮಸ್ಯೆಗೂ
ಕಾರಣವಾಗುತ್ತಿದೆ.

ವಾಹನ ಸಂಚಾರವೂ ಹೆಚ್ಚಳ:ಕೋವಿಡ್ ಕಾಣಿಸಿ ಕೊಂಡ ಬಳಿಕ ಬಾಗಿಲು ಮುಚ್ಚಿ, ಮನೆಯಿಂದಲೇ ಕಾರ್ಯನಿರ್ವಹಣೆಗೆ ಅವಕಾಶ ನೀಡಿದ್ದ ಐಟಿ–ಬಿಟಿ ಕಂಪನಿಗಳು, ಈಗ ವಾರದಲ್ಲಿ ಕೆಲವು ದಿನ ಕಚೇರಿಗೆ ಬರಲು ಸಿಬ್ಬಂದಿಗೆ ಸೂಚಿಸಿವೆ. ಇದರಿಂದಾಗಿ ವಾಹನಗಳ ಸಂಚಾರವೂ ಹೆಚ್ಚಳವಾಗಿದೆ. ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿ ಕೆಲವೆಡೆ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿಯೂ ವಾತಾವರಣದಲ್ಲಿನ ಮಲಿನಕಾರಕ ಕಣಗಳು ಹೆಚ್ಚಳವಾಗುತ್ತಿವೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪ್ರಕಾರಬಿಟಿಎಂ ಲೇಔಟ್, ಜಯನಗರ, ಸಿಲ್ಕ್ ಬೋರ್ಡ್, ಬಾಪೂಜಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ ಕೆಲವು ಅವಧಿಯಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ ನೂರರ ಗಡಿ ದಾಟುತ್ತಿದೆ. ಈ ಪ್ರಮಾಣ ಕಳೆದ ತಿಂಗಳು 100ಕ್ಕಿಂತ ಕಡಿಮೆಯಿತ್ತು. ಈ ತಿಂಗಳು ಕೆಲವು ದಿನ ಮಾಲಿನ್ಯಕಾರಕ ಕಣಗಳು(ಪಿಎಂ)-10 (ಸೂಕ್ಷ್ಮ) ಹಾಗೂ ಪಿಎಂ-2.5 (ಅತಿ ಸೂಕ್ಷ್ಮ) ದೂಳಿನ ಕಣಗಳು ಕಾಣಿಸಿಕೊಳ್ಳುತ್ತಿವೆ.

‘ಗಾಳಿಯ ಗುಣಮಟ್ಟ ಹದಗೆಟ್ಟಲ್ಲಿ ಉಸಿರಾಟದ ಸಮಸ್ಯೆ, ತ್ವಚೆಯ ಅಲರ್ಜಿ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಕಾಣಿಸಿಕೊಳ್ಳಲಿವೆ. ಆದ್ದರಿಂದ ಅನಗತ್ಯವಾಗಿ ಹೊರಗಡೆ ಓಡಾಡಬಾರದು’ ಎಂದು ಕೆ.ಸಿ. ಜನರಲ್ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ರಾಧಾಕೃಷ್ಣ ಅವರು ತಿಳಿಸಿದರು.

ತಳಮಟ್ಟದಲ್ಲೇ ತೇಲಾಡುವಕಣಗಳು’

‘ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗಿ, ತೇವಾಂಶ ಹೆಚ್ಚುವುದರಿಂದ ದೂಳಿನ ಕಣಗಳು ಆಕಾಶಕ್ಕೆ ಹೋಗದೆ, ತಳಮಟ್ಟದಲ್ಲೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಜೋರಾದ ಗಾಳಿ ಬೀಸಿದಾಗ ಈ ದೂಳಿನ ಕಣಗಳು ಹರಡಿ, ಹೆಚ್ಚು ವಾಯುಮಾಲಿನ್ಯ ಉಂಟಾಗಲು ಕಾರಣವಾಗುತ್ತವೆ. ಬೇಸಿಗೆಯಲ್ಲಿ ದೂಳಿನ ಕಣಗಳು ಸುಮಾರು 1 ಕಿ.ಮೀ. ಗಿಂತ ಹೆಚ್ಚು ಮೇಲಕ್ಕೆ ಹೋಗುತ್ತವೆ. ಚಳಿಗಾಲದಲ್ಲಿ ಇವು ಅಷ್ಟು ಎತ್ತರ ಹೋಗುವುದಿಲ್ಲ’ ಎಂದು ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‌‘ಗಾಳಿಯ ಗುಣಮಟ್ಟದ ಸೂಚ್ಯಂಕವು 50ರ ಒಳಗಡೆಯಿದ್ದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಎಕ್ಯುಐ 51ರಿಂದ 100ರ ಒಳಗಡೆ ಇದ್ದಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 101ರಿಂದ 200ರ ಗಡಿಯ ನಡುವೆ ಇದ್ದಲ್ಲಿ ಶ್ವಾಸಕೋಶ, ಹೃದಯ ಕಾಯಿಲೆಗಳು ಕೂಡ ಬರುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT