ಬೆಂಗಳೂರು: ಹೈಕೋರ್ಟ್ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ ಕಾಮ್ರೇಡ್ ಎಂ.ಸಿ. ನರಸಿಂಹನ್ (98) ಬುಧವಾರ ಸಂಜೆ 5 ಗಂಟೆಗೆ ನಿಧನರಾದರು.
ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಮೂವರು ಪುತ್ರಿಯರಿದ್ದಾರೆ.
ರಾಜ್ಯದ ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆಯಾಗಿದ್ದರು.
ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು.