ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಮೇ 4ರಂದು ಕೋವಿಡ್ ವಾರ್ ರೂಮ್ ಮೇಲೆ ದಾಳಿ ನಡೆಸಿದ ನಂತರ ಅಮಾನತುಗೊಂಡಿದ್ದ 17 ಮುಸ್ಲಿಂ ನೌಕರರು ಸೋಮವಾರದಿಂದ (ಮೇ 10) ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಬಿಬಿಎಂಪಿಯಲ್ಲಿ ಹಾಸಿಗೆ ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದ ಸಂಸದ ಮತ್ತು ಶಾಸಕರು ಈ ನೌಕರರ ವಿರುದ್ಧ ಹರಿಹಾಯ್ದಿದ್ದರು. ಈ ಹಗರಣಕ್ಕೆ ಕೋಮು ಸ್ವರೂಪ ನೀಡಿದ್ದರು. ವಾರ್ ರೂಮ್ನಲ್ಲಿ 212 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಂ ಸಮುದಾಯದ ಒಬ್ಬರು ಮಾತ್ರ ಹಾಸಿಗೆ ನಿಯೋಜನೆ ವಿಭಾಗದಲ್ಲಿ ಇದ್ದರು.
ಕ್ರಿಸ್ಟಲ್ ಇನ್ಫೊಸಿಸ್ಟಂ ಅಂಡ್ ಸರ್ವಿಸಸ್ ಎಂಬ ಹೊರಗುತ್ತಿಗೆ ಸಂಸ್ಥೆ ಈ ನೌಕರರನ್ನು ಬಿಬಿಎಂಪಿಗೆ ಪೂರೈಸಿತ್ತು. ಈ ಸಂಸ್ಥೆಯ ಅಧಿಕಾರಿಗಳು, ಕೋವಿಡ್ ದಕ್ಷಿಣ ವಲಯ ವಾರ್ ರೂಮ್ನ ಉಸ್ತುವಾರಿ, ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಶನಿವಾರ ಭೇಟಿ ಮಾಡಿದ್ದು, ‘ಈ ಮುಸ್ಲಿಂ ನೌಕರರು ಹಾಸಿಗೆ ಬ್ಲಾಕಿಂಗ್ನಲ್ಲಿ ಪಾಲ್ಗೊಂಡಿಲ್ಲ. ಇವರನ್ನು ಮರುನೇಮಕ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
‘ಈ ಕೆಲಸವು ಅನೇಕರ ಜೀವನದ ಪ್ರಶ್ನೆಯಾಗಿದೆ. 17 ಮುಸ್ಲಿಂ ನೌಕರರನ್ನು ಮತ್ತೆ ನೇಮಿಸಿಕೊಳ್ಳಲಾಗುವುದು. ಸೋಮವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ’ ಎಂದು ತುಳಸಿ ಮದ್ದಿನೇನಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.