ಬೆಂಗಳೂರು: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಗರದ ವ್ಯಕ್ತಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
‘ನನಗೆ ಹಾಗೂ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಜೂ.23ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದೆವು. ಮೊದಲ ಎರಡು ದಿನಗಳು ಸಾಮಾನ್ಯ ವಾರ್ಡ್ನಲ್ಲಿ ಇದ್ದೆವು. ವೈದ್ಯರು ಹಾಗೂ ಶುಶ್ರೂಷಕರು ರೋಗಿಗಳ ಆರೋಗ್ಯವನ್ನು ನಿತ್ಯ ವಿಚಾರಿಸಿ, ಅಗತ್ಯ ಆರೈಕೆ ಮಾಡುತ್ತಿದ್ದರು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಎಲ್ಲವೂ ಸಮಯಕ್ಕೆ ಸರಿಯಾಗಿ ಪೂರೈಕೆಯಾಗುತ್ತಿತ್ತು. ನಾನಿದ್ದ ವಾರ್ಡ್ನಲ್ಲಿನ ಇತರ ರೋಗಿಗಳೂ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಎರಡು ದಿನಗಳ ಬಳಿಕ ನಾವು ವಿಶೇಷ ವಾರ್ಡ್ಗೆ ಹೋದೆವು. ಅಲ್ಲೂ ಮನೆಗಿಂತಲೂ ಉತ್ತಮವಾದ ಆಹಾರ ನೀಡಲಾಗುತ್ತಿತ್ತು. ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ಆರೋಗ್ಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಗೆ ಧನ್ಯವಾದಗಳು’ ಎಂದು ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪತ್ರದ ಪ್ರತಿಯನ್ನು ಸುಧಾಕರ್ ಟ್ವಿಟರ್ನಲ್ಲಿ ಹಂಚಿಕೊಂಡು, ‘ಜನ ಬೆನ್ನು ತಟ್ಟಿದರೆ ಕೊರೊನಾ ಯೋಧರ ಉತ್ಸಾಹ ಇಮ್ಮಡಿಯಾಗುತ್ತದೆ’ ಎಂದು ತಿಳಿಸಿದ್ದಾರೆ.