ಬೆಂಗಳೂರು: ಕರ್ನಾಟಕದ ಹೊರ ಭಾಗದಿಂದ ಬೆಂಗಳೂರು ಪ್ರವೇಶಿಸುವವರು ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಿಸಿರಬೇಕು ಹಾಗೂ ವರದಿ ನೆಗೆಟಿವ್ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗುರುವಾರ ಹೇಳಿದರು.
ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಮಾತ್ರವೇ ಈ ನಿಯಮ ಅನ್ವಯವಾಗಲಿದ್ದು, ರಾಜ್ಯದ ಉಳಿದ ಭಾಗಗಳಿಗೆ ಅಲ್ಲ. ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಯಾಗಲಿದೆ ಎಂದರು.
'ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಕೋವಿಡ್–19 ಪ್ರಕರಣಗಳ ಪೈಕಿ ಶೇ 60ರಷ್ಟು ಅಂತರ್ ರಾಜ್ಯ ಪ್ರಯಾಣಿಕರಲ್ಲಿ ವರದಿಯಾಗಿದೆ. ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ವಾಸಿಸುವವರು ಹೊರ ರಾಜ್ಯಗಳಿಂದ ಬರುತ್ತಿದ್ದರೆ ಕಡ್ಡಾಯವಾಗಿ ಆರ್ಟಿ–ಪಿಸಿಆರ್ ಪರೀಕ್ಷೆ ಮಾಡಿಸಬೇಕು. ಯಾವುದೇ ರಾಜ್ಯದಿಂದ ಬಂದರೂ ಪರೀಕ್ಷೆ ಕಡ್ಡಾಯ. ಬಿಬಿಎಂಪಿ ಕಮಿಷನರ್ ಈ ಕುರಿತು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದ್ದಾರೆ' ಎಂದು ಸುಧಾಕರ್ ತಿಳಿಸಿದರು.
ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಇರುವುದು ಕಡ್ಡಾಯ, ಇಲ್ಲವಾದರೆ ಅವರಿಗೆ ಇಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ ಎಂದರು.
There are travel restrictions in a way, whoever comes to Bengaluru from other states will have to bring in RT-PCR negative certificates otherwise we will test them here: Dr K Sudhakar, Karnataka Health Minister on Bengaluru
ಪ್ರಸ್ತುತ ಮಹಾರಾಷ್ಟ್ರ, ಕೇರಳ, ಪಂಜಾಬ್ ಹಾಗೂ ಚಂಡೀಗಡದಿಂದ ಬರುವ ಪ್ರಯಾಣಿಕರಿಗೆ ಆರ್ಟಿ–ಪಿಸಿಆರ್ ಪರೀಕ್ಷೆ ಕಡ್ಡಾಯವಿದೆ.
ಬುಧವಾರ ಬೆಂಗಳೂರಿನಲ್ಲಿ ನಾಲ್ಕು ತಿಂಗಳ ಗರಿಷ್ಠ, ಸುಮಾರು 1,400 ಪ್ರಕರಣಗಳು ದಾಖಲಾಗಿವೆ. ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗುರುವಾರ ಬೆಳಿಗ್ಗೆ ಬಿಬಿಎಂಪಿಯ ಎಂಟು ಜಂಟಿ ಆಯುಕ್ತರೊಂದಿಗೆ ಸಚಿವ ಸುಧಾಕರ್ ಚರ್ಚೆ ನಡೆಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಲು ಮಾರ್ಷಲ್ಗಳನ್ನು ನಿಯೋಜಿಸಲಾಗಿದೆ. ಅವರು ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಚಿತ್ರ ಮಂದಿರಗಳು, ಮದುವೆ ಹಾಗೂ ಸಮಾರಂಭಗಳ ಸಭಾಂಗಣಗಳು, ಶಾಲೆಗಳು ಹಾಗೂ ಕಾಲೇಜು ಆವರಣಗಳಲ್ಲಿ ಇರುತ್ತಾರೆ.