ಬೆಂಗಳೂರು: ಎಟಿಎಂ ಯಂತ್ರದಿಂದ ಗ್ಯಾಸ್ ಕಟ್ಟರ್ ಮೂಲಕ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಮರ್ ಜೋತ್ ಸಿಂಗ್ (33), ಎ.ವಿ.ಜಾಫರ್ (30), ಯಹ್ಯಾ (27) ಬಂಧಿತರು.
ಆ.10ರ ರಾತ್ರಿ ಜಾಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂನಿಂದ ₹27.82 ಲಕ್ಷ ಹಣ ದೋಚಿದ್ದರು.ಈ ಬಗ್ಗೆ ಎಟಿಎಂ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ್ ಪೊಲೀಸರು ದೂರು ನೀಡಿದ್ದರು.
ಕಳ್ಳತನಕ್ಕೂ ಮುನ್ನ ಆರೋಪಿಗಳು ಎಟಿಎಂನಿಂದ ಹಣ ತೆಗೆದುಕೊಳ್ಳುವ ನಾಟಕವಾಡಿದ್ದರು. ಅಲ್ಲಿನ ಚಲನವಲನಗಳನ್ನು ವೀಕ್ಷಿಸಿ, ವಾರಾಂತ್ಯದಲ್ಲಿ ಜನರು ಓಡಾಟ ಇಲ್ಲದ ಸಮಯದಲ್ಲಿ ಕಳ್ಳತನ ಮಾಡಿದ್ದಾರೆ. ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಆರೋಪಿಗಳಿಂದ ₹17.34 ಲಕ್ಷ ನಗದು, ಕಳವು ಮಾಡಿರುವ ಕಾರು, ಎರಡು ದ್ವಿಚಕ್ರ ವಾಹನ, ಐಫೋನ್, ಕೃತ್ಯಕ್ಕೆ ಬಳಸುತ್ತಿದ್ದ ಗ್ಯಾಸ್ ಕಟ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.