ಬೆಂಗಳೂರು: ಸರ ಹಾಗೂ ಬೈಕ್ಗಳನ್ನು ಕಳವು ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ತಿಲಕನಗರ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಿಲಕ್ನಗರ, ಕೋರಮಂಗಲ, ಸುಬ್ರಹ್ಮಣ್ಯನಗರ, ಪುಟ್ಟೇನಹಳ್ಳಿ, ಬಸವನಗುಡಿ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಹಾಗೂ ಮೊಬೈಲ್ ಕದಿಯುತ್ತಿದ್ದ ಸಂಜಯ್ (21) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ₹4.30 ಲಕ್ಷ ಬೆಲೆಬಾಳುವ ನಾಲ್ಕು ಚಿನ್ನದ ಸರಗಳು ಹಾಗೂ ಒಂದು ಬೈಕ್ ಜಪ್ತಿ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ತನ್ನ ಸಹಚರರೊಂದಿಗೆ ಬಂದು ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
19 ಬೈಕ್ ವಶ: ತಿಲಕನಗರ ಹಾಗೂ ಮೈಕೊ ಬಡಾವಣೆ ವ್ಯಾಪ್ತಿಗಳಲ್ಲಿ ಬೈಕ್ ಕಳವು ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜಯನಗರದ ಮಗೇಂದ್ರನ್ (20) ಹಾಗೂ ಜರಗನಹಳ್ಳಿಯ ದೀಪಕ್ (19) ಬಂಧಿತರು. ಮನೆಗಳ ಮುಂದೆ ನಿಂತಿರುವ ವಾಹನಗಳನ್ನು ರಾತ್ರಿ ವೇಳೆ ಕದಿಯುತ್ತಿದ್ದರು. ಹ್ಯಾಂಡ್ಲಾಕ್ ಮುರಿದು ಕಳವು ಮಾಡುವುದರಲ್ಲಿ ಇವರು ನಿಸ್ಸೀಮರಾಗಿದ್ದರು ಎಂದು ಪೊಲೀಸರು ತಿಳಿಸಿದರು.
‘ಮಗೇಂದ್ರನ್ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ದೀಪಕ್, ನ್ಯಾಯಾಲಯಕ್ಕೆ ಹಾಜರಾಗದೆ, ತಲೆಮರೆಸಿಕೊಂಡಿದ್ದ. ಆರೋಪಿಗಳಿಂದ ₹20 ಲಕ್ಷ ಬೆಲೆ ಬಾಳುವ 19 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.