ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ₹50 ಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ವಿಜಯ್ ಆಕಾಶ್ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಹೈದರಾಬಾದ್ನಲ್ಲಿ ಬುಧವಾರ ಬಂಧಿಸಿದ್ದಾರೆ.
‘ಚೆನ್ನೈನ ವಿಜಯ್ ಆಕಾಶ್ (55), ಆತನ ಮಗ ಪ್ರೇಮರಾಜ್ (35) ಹಾಗೂ ದಿನೇಶ್ ಬಾಬೂಜಿ (30) ಎಂಬುವರನ್ನು ಬಂಧಿಸಲಾಗಿದೆ. ವಿಜಯ್ ವಿರುದ್ಧ ಹೈದರಾಬಾದ್, ತಿರುಪತಿ ಹಾಗೂ ಕೊಯಮತ್ತೂರು ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ' ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.
ಏನಿದು ಪ್ರಕರಣ?: ರೈತರ ನಷ್ಟ ಭರಿಸುವ ಉದ್ದೇಶದಿಂದಕೃಷಿ ಮಾರಾಟ ಮಂಡಳಿಯಲ್ಲಿ ಆವರ್ತನಿಧಿ ಇಡಲಾಗಿತ್ತು. 2019ರಲ್ಲಿ ಮಂಡಳಿಯಲ್ಲಿದ್ದ ಹೆಚ್ಚುವರಿ ₹100 ಕೋಟಿಯನ್ನು ಸಿಂಡಿಕೇಟ್ ಬ್ಯಾಂಕ್ನಉತ್ತರಹಳ್ಳಿ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಹಲವರು ಶಾಮೀಲಾಗಿ ನಕಲಿ ಅಧಿಕಾರಿಯ ಹೆಸರಿನಲ್ಲಿ ₹50 ಕೋಟಿ ಠೇವಣಿ ಇಟ್ಟು ವಂಚಿಸಿದ್ದರು.
ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಕೃಷಿ ಮಾರಾಟ ಮಂಡಳಿ ನೌಕರರು, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ 15 ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.