ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯ್ಯ ಆತ್ಮಹತ್ಯೆ: ಆತ್ಮಹತ್ಯೆಗೆ ಮುನ್ನ ಮರಣ ಪತ್ರ

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ, ಸಾಲ ಪಡೆದು ವಂಚಿಸಿದ್ದ 8 ಮಂದಿಯ ಹೆಸರು ಉಲ್ಲೇಖ
Last Updated 8 ಜುಲೈ 2020, 1:53 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ಅವ್ಯವಹಾರ ಆರೋಪದ ಸುಳಿಗೆ ಸಿಕ್ಕಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ವಾಸುದೇವ ಮಯ್ಯ ಆರು ಪುಟಗಳ ಪತ್ರ ಬರೆದಿಟ್ಟಿದ್ದು, ಅದರಲ್ಲಿ ಎಂಟು ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

‘ಬ್ಯಾಂಕಿನ ಅವ್ಯವಹಾರಕ್ಕೆ ನಾನೊಬ್ಬನೇ ಕಾರಣವಲ್ಲ. ಬೇರೆಯವರ ಪಾತ್ರವೂ ಇದೆ. ಆದರೆ, ಅಪವಾದ ಮಾತ್ರ ನನ್ನ ಮೇಲೆ ಬಂದಿದೆ. ಅನೇಕರನ್ನು ನಂಬಿ ಸಾಲ ಕೊಟ್ಟೆ. ಸಾಲ ಪಡೆದವರು ಮರುಪಾವತಿಸದೆ ವಂಚಿಸಿದರು’ ಎಂದು ಮಯ್ಯ ಪತ್ರದಲ್ಲಿ ಬರೆದಿದ್ದಾರೆ ಎಂದು ಗೊತ್ತಾಗಿದೆ.

‘ಬ್ಯಾಂಕಿನಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದು ಕೈ ಎತ್ತಿದ ಎಂಟು ಜನರ ಹೆಸರನ್ನು ಬರೆದಿದ್ದು, ಇವರೆಲ್ಲರಿಂದಾಗಿ ನಾನು ಅಪಮಾನ ಅನುಭವಿಸುವಂತಾಯಿತು. ಸಮಾಜಕ್ಕೆ ಮುಖ ತೋರಿಸದಂತಾಯಿತು. ಠೇವಣಿದಾರರ ನಂಬಿಕೆಯನ್ನು ಕಳೆದುಕೊಳ್ಳಬೇಕಾಯಿತು’ ಎಂದು ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

‘ಅನೇಕರು ನನ್ನಿಂದ ಪ್ರಯೋಜನ ಪಡೆದು ಮೋಸ ಮಾಡಿದರು. ನಾನು ಯಾವುದೇ ಆಸ್ತಿ ಸಂಪಾದನೆ ಮಾಡಿಲ್ಲ. ಬದಲಿಗೆ ಎಲ್ಲವನ್ನೂ ಕಳೆದುಕೊಂ ಡಿದ್ದೇನೆ. ಬ್ಯಾಂಕಿನಿಂದ ಲಾಭ ಪಡೆದವರು ಯಾರೋ; ಮಜಾ ಮಾಡಿದವರು ಮತ್ಯಾರೋ. ಈ ವ್ಯವಹಾರದಲ್ಲಿ ನಾನು ಬಲಿಪಶುವಾದೆ’ ಎಂದು ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಾಯುವ ಮೊದಲು ಬರೆದಿದ್ದಾರೆ ಎನ್ನಲಾದ ಪತ್ರವನ್ನು ಪೊಲೀಸರು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆನಂತರ, ಬ್ಯಾಂಕಿನ ಅವ್ಯವಹಾರ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಕಳುಹಿಸಲಿದ್ದಾರೆ.

ಈ ಮಧ್ಯೆ, ಆತ್ಮಹತ್ಯೆಗೆ ಸಂಬಂಧಿಸಿದಂತೆಸುಬ್ರಹ್ಮಣ್ಯಪುರ ಪೊಲೀಸರು ಕುಟುಂಬ ಸದಸ್ಯರ ಹೇಳಿಕೆಯನ್ನು ಪಡೆದಿದ್ದಾರೆ.

2012ರಿಂದ 2018ರವರೆಗೆ ಮಯ್ಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾಗ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ನಕಲಿ ಖಾತೆಗಳ ಮೂಲಕ ನೀಡಿರುವ ₹ 1,400 ಕೋಟಿ ಸಾಲ ವಸೂಲಾಗದಿದ್ದರಿಂದ ಬ್ಯಾಂಕ್‌ ದಿವಾಳಿಯಾಗಿದೆ ಎಂದೂ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT