ಬೆಂಗಳೂರು: ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ದಲಿತ ನೌಕರರನ್ನು ಕಾಯಂಗೊಳಿಸುವಂತೆ ಅಖಿಲ ಭಾರತ ದಲಿತ ಮಹಾಸಂಘ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಭೀಮರಾಜ್, ‘ರಾಜ್ಯದ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ 5 ವರ್ಷದವರೆಗೆ ಕಾರ್ಯನಿರ್ವಹಿಸುವ ನೌಕರರಿಗೆ ವೇತನ ಶ್ರೇಣಿ ನೀಡಿ ಕಾಯಂಗೊಳಿಸಬೇಕು ಎಂಬುದು ಸರ್ಕಾರದ ಆದೇಶವಿದೆ. ಆದರೆ ಅದನ್ನು ಉಲ್ಲಂಘಿಸಲಾಗುತ್ತಿದೆ. ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಗೀತಾ ಪ್ರಸನ್ನ ಅವರನ್ನು ದಲಿತರು ಎಂಬ ಕಾರಣಕ್ಕೆ ಕಾಯಂಗೊಳಿಸಿಲ್ಲ’ ಎಂದು ದೂರಿದರು.
‘ಮುಜರಾಯಿ ಇಲಾಖೆಯಲ್ಲಿ ರೇವತಿ, ಮಹಾಲಕ್ಷ್ಮಿ, ಗಂಗಾಧರ್ ಅವರು ಸ್ಕ್ಯಾವೆಂಜರ್ ಆಗಿ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೋವಿಡ್–19 ಸಂದರ್ಭದಲ್ಲಿ ಕೆಲಸ ಮಾಡಿದ ಇಂತಹ ಸಿಬ್ಬಂದಿಯನ್ನು ನೋಟಿಸ್ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಇವರೆಲ್ಲರನ್ನೂ ಕೆಲಸದಿಂದ ತೆಗೆದು ಹಾಕಿದ ದಿನದಿಂದ ಎಲ್ಲ ಸವಲತ್ತುಗಳು ಹಾಗೂ ಬಾಕಿ ಸಂಬಳವನ್ನು ನೀಡಿ, ವೇತನ ನಿಗಿದಿ ಮಾಡಿ ಕಾಯಂಗೊಳಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.