ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಂಸತ್ತಿನಲ್ಲಿ ಸೆಂಗೋಲ್‌ ತೆರವುಗೊಳಿಸಿ ಸಂವಿಧಾನ ಪ್ರತಿ ಇಡಲು ಆಗ್ರಹ

Published 14 ಏಪ್ರಿಲ್ 2024, 16:21 IST
Last Updated 14 ಏಪ್ರಿಲ್ 2024, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ನೂತನ ಸಂಸತ್ತಿನಲ್ಲಿ ಸ್ಥಾಪಿಸಿರುವ ಸೆಂಗೋಲ್‌ (ರಾಜದಂಡ) ವೈದಿಕಶಾಹಿ ಮತ್ತು ಜಾತಿ ವ್ಯವಸ್ಥೆಯ ಸಂಕೇತ. ಅದನ್ನು ತೆರವುಗೊಳಿಸಿ, ಡಾ.ಬಿ.ಆರ್. ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ಪ್ರತಿಯನ್ನು ಇಡಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಭಾನುವಾರ ಆಯೋಜಿಸಿದ್ದ ‘ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಜಯಂತಿ–ಮುಕ್ತ ಸಂವಾದ’ದಲ್ಲಿ ಅವರು ಮಾತನಾಡಿದರು.

‘ನೂತನ ಸಂಸತ್ತಿನ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇರಬೇಕಾಗಿತ್ತು. ಆದರೆ ಅವರು ಇರಲಿಲ್ಲ, ಏಕೆಂದರೆ ವೈದಿಕ ಪರಂಪರೆಯ ಪ್ರಕಾರ ಗಂಡ ಸತ್ತ ಹೆಣ್ಣು ಮಗಳು ಯಾವುದೇ ಶುಭ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂಬ ನಿಯಮವಿದೆ. ಆ ಕಾರಣಕ್ಕಾಗಿ ಆದಿವಾಸಿ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ, ಬೌದ್ಧ ಬ್ರಾಹ್ಮಣರು, ಪೂಜಾರಿಗಳು ಹಾಗೂ ಪುರೋಹಿತರನ್ನು ಆಹ್ವಾನಿಸಲಾಗಿತ್ತು’ ಎಂದರು.

‘ಲೋಕಸಭಾ ಚುನಾವಣೆ ಸಂವಿಧಾನ ಮತ್ತು ಮನೋಧರ್ಮದ ನಡುವಿನ ಬಹುದೊಡ್ಡ ಸಂಘರ್ಷ ಪ್ರಾರಂಭವಾಗಿದೆ. ಈ ಚುನಾವಣೆ ಸಂಘರ್ಷ ಕಣದಲ್ಲಿ ನಾವು ಸಂವಿಧಾನದ ಪರವಾಗಿ ಇದ್ದೇವೆ ಎಂಬುದನ್ನು ರುಜುವಾತು ಮಾಡಬೇಕಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ, ಎಂಸಿಪಿ ಕಾಯ್ದೆ ಜಾರಿಗೊಳಿಸುವ ಭರವಸೆ, ಶೇ 50ರಷ್ಟಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ, ದೇಶದ ಬಹುಸಂಖ್ಯಾತರು ಕಾಂಗ್ರೆಸ್‌ಗೆ ಬೆಂಬಲ ನೀಡುವುದರ ಮೂಲಕ ಸಂಸತ್ತಿನಲ್ಲಿ ಸ್ಥಾಪಿಸಿರುವ ಸೆಂಗೋಲ್‌ ತೆರವುಗೊಳಿಸಿ ಕೈ ಜೋಡಿಸಬೇಕು’ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವೆಂಕಟೇಶ್ ಕುಮಾರ್, ಶಿವಕುಮಾರ್ ಹೆಗ್ಗನೂರು, ವೆಂಕಟೇಶ್ ಕೋರಮಂಗಲ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT