ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರ್ಥ ಬಡಾವಣೆ: ಮೂಲಸೌಕರ್ಯಕ್ಕೆ ಆಗ್ರಹ

Published 8 ಫೆಬ್ರುವರಿ 2024, 15:43 IST
Last Updated 8 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಕೆ.ಆರ್.ಪುರ: ಕಾಡುಗೋಡಿ ವಾರ್ಡಿನ ಸಿದ್ಧಾರ್ಥ ಬಡಾವಣೆಗೆ ಕುಡಿಯುವ ನೀರು, ಚರಂಡಿ, ಶೌಚಾಲಯ, ಸಾರ್ವಜನಿಕ ರಸ್ತೆ ಒದಗಿಸುವಂತೆ ಬಡಾವಣೆಯ ನಿವಾಸಿಗಳು ಹಾಗೂ ಕರ್ನಾಟಕ ದಲಿತ ಕ್ರಿಯಾ ವೇದಿಕೆ ಸಂಘಟನೆಯ ಕಾರ್ಯಕರ್ತರು ಕಾಡುಗೋಡಿ ಬಿಬಿಎಂಪಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

‘ಸಿದ್ದಾರ್ಥ ಬಡಾವಣೆಯಲ್ಲಿ 1500ಕ್ಕೂ ಹೆಚ್ಚು ವಸತಿ ಕಟ್ಟಡಗಳಿದ್ದು, 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಡಾವಣೆಗೆ ರಸ್ತೆಯಿಲ್ಲ. ಬಡಾವಣೆ ಪಕ್ಕದಲ್ಲಿನ ರೈಲ್ವೆ ಕೆಳ ಸೇತುವೆಯ ಮೂಲಕವೇ ಇತರ ಮಾರ್ಗಗಳಿಗೆ ತೆರಳಬೇಕು. ಈ ಸಂದರ್ಭದಲ್ಲಿ ರೈಲ್ವೆ ಅಪಘಾತಗಳಾಗಿ ತೊಂದರೆ ಅನುಭವಿಸುವಂತಾಗಿದೆ. ಮೂಲಸೌಕರ್ಯಗಳು ಬಡಾವಣೆಗೆ ಕನಸಿನ ಮಾತಾಗಿದೆ’ ಎಂದು ನಿವಾಸಿಗಳು ದೂರಿದರು.

‘ಕುಡಿಯುವ ನೀರಿಲ್ಲದೆ ನಿತ್ಯ ನರಕಯಾತನೆ ಅನುಭವಿಸಲಾಗುತ್ತಿದೆ. ಮೂಲಸೌಕರ್ಯ ಒದಗಿಸಲು ಬಿಬಿಎಂಪಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇನ್ನೂ ಕ್ರಮ ಕೈಗೊಳ್ಳದಿದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ದಲಿತ ಕ್ರಿಯಾ ವೇದಿಕೆ ಕಾರ್ಯಾಧ್ಯಕ್ಷ ಕಾಡುಗೋಡಿ ಸೊಣ್ಣಪ್ಪ ಹೇಳಿದರು.

‘ಸಂಸದರು, ಸ್ಥಳೀಯ ಶಾಸಕ ಹಾಗೂ ಅಧಿಕಾರಿಗಳಿಗೆ ಮೂಲಸೌಕರ್ಯ ಒದಗಿಸಲು ಹಲವಾರು ಬಾರಿ ಮನವಿ ಮಾಡಲಾಗಿದೆ. ಅವರೂ ಕ್ರಮ ಕೈಗೊಂಡಿಲ್ಲ’ ಎಂದು ಡಿಎಸ್ಎಸ್ ಭೀಮ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್ ದೂರಿದರು.

‘ಮುಂದೆ ಬರುವ ಚುನಾವಣೆಯಲ್ಲಿ ಮತದಾನ ಮಾಡದೆ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಮಾಡಲಾಗುತ್ತದೆ’ ಎಂದು ಕೆ.ಆರ್.ಎಸ್. ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಬೆಳತೂರು ವೆಂಕಟೇಶ್ ಎಚ್ಚರಿಕೆ ನೀಡಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ವೆಂಕಟೇಶ್, ಸಿ.ಮುನಿಯಪ್ಪ, ಎಸ್.ಕೆ.ವೆಂಕಟೇಶ್, ಕ್ರಿಸ್ತುರಾಜ್, ಮಧು ವಲಿಯರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT