ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ಲಿಂಗಿ ಸಲುಗೆ: ಚಾಲಕನ ಕೊಲೆಗೆ ಯತ್ನ

Last Updated 22 ಫೆಬ್ರುವರಿ 2022, 16:26 IST
ಅಕ್ಷರ ಗಾತ್ರ

ಬೆಂಗಳೂರು: ತೃತೀಯ ಲಿಂಗಿ ಜೊತೆಗಿನ ಸಲುಗೆ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಆಟೊ ಚಾಲಕ ಸ್ಯಾಮ್ಯುಯೆಲ್ (24) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.

‘ಸ್ಥಳೀಯ ಎ.ಕೆ. ಕಾಲೊನಿ ನಿವಾಸಿ ಸ್ಯಾಮ್ಯುಯೆಲ್ ತೀವ್ರ ಗಾಯಗೊಂಡಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಯತ್ನ ಆರೋಪದಡಿ ಪ್ರವೀಣ್ ಅಲಿಯಾಸ್ ಪುಣೆ (24) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ಯಾಮ್ಯುಯೆಲ್ ಹಾಗೂ ಪ್ರವೀಣ್, ಇಬ್ಬರೂ ಸ್ನೇಹಿತರು. ಗಾಯಾಳು ಸ್ಯಾಮ್ಯುಯೆಲ್, ತೃತೀಯ ಲಿಂಗಿಯೊಬ್ಬರ ಜೊತೆ ಕೆಲ ವರ್ಷಗಳಿಂದ ಒಡನಾಟ ಹೊಂದಿದ್ದರು. ಅದೇ ತೃತೀಯ ಲಿಂಗಿ ಜೊತೆ ಕೆಲದಿನಗಳಿಂದ ಪ್ರವೀಣ್ ಸುತ್ತಾಡುತ್ತಿದ್ದ. ಇದೇ ವಿಚಾರವಾಗಿ ಅವರಿಬ್ಬರ ನಡುವೆ ವೈಷಮ್ಯ ಬೆಳೆದಿತ್ತು.’

‘ತೃತೀಯ ಲಿಂಗಿ ಜೊತೆಗೆ ಸ್ಯಾಮ್ಯುಯೆಲ್ ಖಾಸಗಿ ಕ್ಷಣ ಕಳೆಯುತ್ತಿದ್ದ ವಿಡಿಯೊವನ್ನು ಪ್ರವೀಣ್ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಆ ವಿಡಿಯೊ ತೋರಿಸಿ ಬ್ಲ್ಯಾಕ್‌ಮೇಲ್ ಸಹ ಮಾಡುತ್ತಿದ್ದ ಎನ್ನಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮದ್ಯದ ಅಮಲಿನಲ್ಲಿ ಮಾರಾಮಾರಿ: ‘ಠಾಣೆ ವ್ಯಾಪ್ತಿಯ ತ್ರಿವಳಿ ಜಂಕ್ಷನ್ ಬಳಿಯ ಬಾರ್‌ಗೆ ಒಟ್ಟಿಗೆ ಬಂದಿದ್ದ ಸ್ಯಾಮ್ಯುಯೆಲ್ ಹಾಗೂ ಪ್ರವೀಣ್, ಮದ್ಯ ಕುಡಿದಿದ್ದರು. ಅದರ ಅಮಲಿನಲ್ಲಿ ಪರಸ್ಪರ ಬೈದಾಡಿಕೊಂಡಿದ್ದರು. ಜಗಳ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಆರೋಪಿ ಪ್ರವೀಣ್, ಸ್ಯಾಮ್ಯುಯೆಲ್‌ ಎದೆ ಹಾಗೂ ಇತರೆ ಭಾಗಗಳಿಗೆ ಚಾಕುವಿನಿಂದ ಇರಿದಿದ್ದ. ನರಳಾಡುತ್ತಿದ್ದ ಸ್ಯಾಮ್ಯುಯೆಲ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT