ಬೆಂಗಳೂರು: ‘ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸಬೇಕು ಮತ್ತು ರಾಜ್ಯದಲ್ಲಿ ಎಸ್ಡಿಪಿಐ ಅನ್ನು ನಿಷೇಧಿಸಬೇಕು’ ಎಂದು ಶಾಸಕ ಅರವಿಂದ ಲಿಂಬಾವಳಿ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ನೀಡಿದೆ.
ಬುಧವಾರ ಈ ವರದಿಯನ್ನು ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ಕಾಂಗ್ರೆಸ್ ಮತ್ತು ಎಸ್ಡಿಪಿಐ ವ್ಯವಸ್ಥಿತ ಪಿತೂರಿಯಿಂದಲೇ ಈ ಗಲಭೆ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ’ ಎಂದು ಹೇಳಿದರು.
‘ಕಾಂಗ್ರೆಸ್ಗೆ ಅಧಿಕಾರದ ಹುಚ್ಚು ಈ ಗಲಭೆಯ ಹಿಂದಿರುವುದು ಸ್ಪಷ್ಟವಾಗಿದೆ. ಗಲಭೆ 2 ರಿಂದ 3 ಗಂಟೆ ಕಾಲ ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಗಲಭೆಗೆ ಮೊದಲೇ ಒಡೆಯಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲು ಮತ್ತು ಗಲಭೆಗೆ ಬೇಕಿರುವ ಮಾರಕಾಸ್ತ್ರಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳಲಾಗಿತ್ತು, ಪೂರ್ವ ನಿಯೋಜಿತ ಎಂಬುದಕ್ಕೆ ಇದು ಸಾಕ್ಷಿ’ ಎಂದು ಕಟೀಲ್ ಹೇಳಿದರು.
‘ಬಿಬಿಎಂಪಿ ಸದಸ್ಯರಾದ ಅಬ್ದುಲ್ ಹಫೀಜ್ ಜಾಫಿ, ಸಂಪತ್ ರಾಜ್, ಇರ್ಷಾದ್ ಬೇಗಂ ಅವರ ಪತಿ ಈ ಕೃತ್ಯದಲ್ಲಿ ಕೈಜೋಡಿಸಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು ಆಂತರಿಕ ನಾಯಕತ್ವದ ಸಮಸ್ಯೆ ಪರಿಹರಿಸದೇ ಇರುವುದೇ ಗಲಭೆಗೆ ಕಾರಣ’ ಎಂದೂ ಅವರು ಆರೋಪಿಸಿದರು.
‘ಈ ವರದಿಯನ್ನು ನಾಳೆ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು’ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.
ಸತ್ಯಶೋಧನಾ ಸಮಿತಿಯಲ್ಲಿ ಸಂಸದರಾದ ಪಿ.ಸಿ.ಮೋಹನ್, ನಾರಾಯಣಸ್ವಾಮಿ ಅವರು ಸಮಿತಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.