ಬೆಂಗಳೂರು: ಆರ್ಟ್ ಆಫ್ ಲಿವಿಂಗ್ನ ಅಂತರರಾಷ್ಟ್ರೀಯ ಕೇಂದ್ರದಲ್ಲಿ ‘ಪರಿಶ್ರಮ ದಿವ್ಯಾಂಗ ಕ್ರೀಡಾ ಅಕಾಡೆಮಿ’ ಆಯೋಜಿಸಿದ್ದ ವಿಶೇಷ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ 35 ಪುರುಷರು, 25 ಮಹಿಳಾ ಕ್ರೀಡಾಪಟುಗಳು ಹಾಗೂ 10 ಸಹಚರರು ಭಾಗವಹಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ‘ಈ ಅಕಾಡೆಮಿಯು ಆಶಾಕಿರಣವಾಗಿದ್ದು, ಒತ್ತಡಕ್ಕೆ ಒಳಗಾಗುತ್ತಿರುವ ಯುವಕರಿಗೆ ಇದು ದಾರಿ ತೋರಿಸುತ್ತಿದೆ. ಜೀವನದಲ್ಲಿ ಕ್ರೀಡಾ ಸ್ಫೂರ್ತಿ ಇದ್ದರೆ ಸಂತೋಷದ ಮನಸ್ಸು ಹೊಂದಿರಲು ಸಾಧ್ಯ’ ಎಂದು ತಿಳಿಸಿದರು.
ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಕ್ರೀಡಾಪಟುಗಳ ವಿಭಾಗದ ಅಧ್ಯಕ್ಷ ಸತ್ಯನಾರಾಯಣ, ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ವೈದ್ಯಕೀಯ ನಿರ್ದೇಶಕ ಅಮೇಯ, ಕೆಪಿಎಸ್ಇ ಮಾಜಿ ಸದಸ್ಯೆ ಮಂಗಳಾ ಶ್ರೀಧರ್, ಸುಮಧುರ ಗ್ರೂಪ್ ಸಿಇಒ ಗಿರಿಧರ್ ಕುಮಾರ್, ಸಸ್ಟೈನೆಬಿಲಿಟಿ ಮತ್ತು ಸಿಎಸ್ಆರ್ ಮುಖ್ಯಸ್ಥ ಜೀವನ ಕಲಾಕುಂದಲ, ಟಿಸಿಎಫ್ಎಂ - ಎಂಬಸ್ಸಿ ಗ್ರೂಪ್ ಸಿಇಒ ಅಶ್ವಿನಿ ವಲಾವಲ್ಕರ್ ಭಾಗವಹಿಸಿದ್ದರು.
ಶನಿವಾರ ಆರಂಭಗೊಂಡಿರುವ ಪಂದ್ಯಕೂಟ ಭಾನುವಾರವೂ ಮುಂದುವರಿಯಲಿದ್ದು, ವಿರಾಮದ ಸಮಯದಲ್ಲಿ ಮಹಿಳೆಯರ ಟಿ20 ಕ್ರಿಕೆಟ್ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.