ಯಲಹಂಕ: ಸಹಕಾರನಗರದ ಕೊಡಿಗೇಹಳ್ಳಿ ವಾರ್ಡ್ ಕಚೇರಿ ಕಟ್ಟಡದ ಮೊದಲನೇ ಮಹಡಿಯಲ್ಲಿ ನೂತನವಾಗಿ ಆರಂಭಿಸಿರುವ ಕೊಡಿಗೇಹಳ್ಳಿ ಶಾಖಾ ಗ್ರಂಥಾಲಯವನ್ನು ಸಚಿವ ಕೃಷ್ಣ ಬೈರೇಗೌಡ ಉದ್ಘಾಟಿಸಿದರು.
ಎರಡು ವರ್ಷಗಳ ಸತತ ಪ್ರಯತ್ನ ಹಾಗೂ ಗ್ರಂಥಾಲಯ ಇಲಾಖೆಯ ಸಹಕಾರದಿಂದ ಇಲ್ಲಿ ಡಿಜಿಟಲ್ ಸೌಲಭ್ಯ ಒಳಗೊಂಡಂತೆ ನೂತನವಾಗಿ ಸಾರ್ವಜನಿಕ ಗ್ರಂಥಾಲಯ ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಸಾವಿರಾರು ಪುಸ್ತಕಗಳು ದೊರೆಯಲಿವೆ ಎಂದು ಸಚಿವರು ತಿಳಿಸಿದರು.
ಹಿರಿಯ ನಾಗರಿಕರು ಮನೆಯಲ್ಲಿ ಕೂರುವುದಕ್ಕಿಂತ ಹೊರಗೆಬಂದು ಓದುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಸುಧಾರಣೆಯಾಗುತ್ತದೆ. ಈ ಕೇಂದ್ರವನ್ನು ಹೆಚ್ಚು ಬಳಕೆ ಮಾಡಿಕೊಂಡರೆ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಿ, ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಮಾತನಾಡಿ, ‘ಈ ಗ್ರಂಥಾಲಯದಲ್ಲಿ 25 ಸಾವಿರಕ್ಕೂ ಹೆಚ್ಚು ಸಾಹಿತ್ಯಿಕ, ವಿವಿಧ ಗ್ರಂಥಗಳು, ಕಲೆ, ನಾಟಕ, ಕಾವ್ಯ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಹಾಗೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಲಭ್ಯವಿವೆ. ನೂರಕ್ಕೂ ಹೆಚ್ಚು ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಈ ಕೇಂದ್ರದಲ್ಲಿವೆ’ ಎಂದು ವಿವರ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಕೆ.ಎಂ. ಚೇತನ್, ಕಾಂಗ್ರೆಸ್ ಮುಖಂಡರಾದ ಎನ್.ಎನ್. ಶ್ರೀನಿವಾಸಯ್ಯ, ಎಂ. ಜಯಗೋಪಾಲಗೌಡ, ಕೆ.ಆರ್. ನಟರಾಜ್, ಮುರಳಿ ಹನುಮಂತೇಗೌಡ, ಕೆ.ಆರ್. ರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.