ಬೆಂಗಳೂರು: ‘ನನ್ನ ಜನ್ಮ ದಿನದ ಪ್ರಯುಕ್ತ ಕಳೆದ 10 ವರ್ಷಗಳಿಂದ ವಿವಿಧ ಕಡೆಗಳಲ್ಲಿ ಬಡವರಿಗೆ ಕುಕ್ಕರ್, ಇಸ್ತ್ರಿಪೆಟ್ಟಿಗೆ, ನೋಟ್ಬುಕ್ ವಿತರಣೆ ಮಾಡುತ್ತಾ ಬಂದಿದ್ದೇನೆ. ಜನವರಿಯಲ್ಲಿ ವರುಣಾ ಕ್ಷೇತ್ರದ ಕುಪ್ಪರವಳ್ಳಿಯಲ್ಲಿ ವಿತರಣೆ ಮಾಡಲಾಗಿತ್ತು. ಅದಕ್ಕೂ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ’ ಎಂದು ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ. ನಂಜಪ್ಪ ಸ್ಪಷ್ಟನೆ ನೀಡಿದ್ದಾರೆ.
‘ದೇವನಹಳ್ಳಿ, ಯಲಹಂಕ, ಹಾವೇರಿ, ಹುಬ್ಬಳ್ಳಿ, ಮಂಡ್ಯ ಹೀಗೆ ಒಂದೊಂದು ವರ್ಷ ಒಂದೊಂದು ಕಡೆ ವಿತರಣೆ ಕಾರ್ಯಕ್ರಮ ನಡೆಸಲಾಗಿತ್ತು. 2022ರಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿತ್ತು. ಎಲ್ಲಿ ಕಾರ್ಯಕ್ರಮ ಮಾಡುತ್ತೇವೆಯೋ ಅಲ್ಲಿನ ಜನಪ್ರತಿನಿಧಿಗಳನ್ನು ಕರೆಯುತ್ತಾ ಬಂದಿದ್ದೇವೆ. ಮೈಸೂರಿನ ಕಾರ್ಯಕ್ರಮವನ್ನು ಕುಪ್ಪರವಳ್ಳಿಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆ ಪ್ರದೇಶ ವರುಣಾ ಕ್ಷೇತ್ರಕ್ಕೆ ಬರುವುದಿದ್ದರೂ ನಮ್ಮ ಕಾರ್ಯಕ್ರಮದ ಫಲಾನುಭವಿಗಳು ಕೇವಲ ಆ ಕ್ಷೇತ್ರದವರಾಗಿರಲಿಲ್ಲ. ಮೈಸೂರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳ 800 ಮಂದಿ ಫಲಾನುಭವಿಗಳಾಗಿದ್ದರು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಭಾರತ್ ಜೋಡೊ ಕಾರ್ಯಕ್ರಮ ಸಹಿತ ಬೇರೆ ಬೇರೆ ಕಾರಣದಿಂದ ಅವರು ಬರಲಾಗುವುದಿಲ್ಲ ಎಂದು ಹೇಳಿದ್ದರಿಂದ ಕಾರ್ಯಕ್ರಮವನ್ನೇ ಮುಂದಕ್ಕೆ ಹಾಕಿ ಜನವರಿ 27ಕ್ಕೆ ನಡೆಸಲಾಗಿತ್ತು. ಆಗ ಯಾವುದೇ ಚುನಾವಣೆ ಘೋಷಣೆಯಾಗಿರಲಿಲ್ಲ ಎಂದರು.
‘ಮಡಿವಾಳ ಸಮಾಜ ಸಂಘಟಿತರಾಗಿರುವುದಕ್ಕೆ ಯತೀಂದ್ರ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸುತ್ತಾ ಆ ಕಾರ್ಯಕ್ರಮವನ್ನು ನೆನಪು ಮಾಡಿಕೊಂಡರು. ಅದನ್ನೇ ವಿವಾದ ಮಾಡಲಾಗಿದೆ. ಈ ವರ್ಷ ಯಾದಗಿರಿಯಲ್ಲಿ ನಮ್ಮ ಸಮಾಜದ ಬಡವರಿಗೆ ಕುಕ್ಕರ್ ಸಹಿತ ವಿವಿಧ ವಸ್ತುಗಳ ವಿತರಣೆ ನಡೆಯಲಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.