ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಡಿ.21ರಿಂದ 24ರಂದು ನಡೆಸಲು ಉದ್ದೇಶಿಸಿರುವ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳ ಪರೀಕ್ಷೆ ಮುಂದೂಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
‘ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಯುವ ಈ ದಿನಾಂಕಗಳಂದೇ ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯು ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ (ಸಿಎಸ್) ಹಾಗೂ ಸ್ಟಾಫ್ ಸೆಲಕ್ಷನ್ ಕಮಿಷನ್ (ಎಸ್ಎಸ್ಸಿ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ನಂತರ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯು ಜ.8ರಿಂದ ಪ್ರಾರಂಭವಾಗಲಿದೆ. ಒಂದೇ ಬಾರಿ ಎಲ್ಲ ಪರೀಕ್ಷೆ ನಡೆಸಿದರೆ ತೊಂದರೆಯಾಗುತ್ತದೆ’ ಎಂದು ಅಭ್ಯರ್ಥಿ ರಾಮ್ ಹೇಳಿದರು.
‘ಆಯೋಗವು ಕೆಎಎಸ್ ಮುಖ್ಯಪರೀಕ್ಷೆಗಳನ್ನು ಮುಂದೂಡಿ ಆ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಮುಖ್ಯಮಂತ್ರಿಯವರು ಎರಡೂ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆದೇಶಿದ್ದರು. ಆದರೆ, ಆಯೋಗ ಕೆಎಎಎಸ್ ಮುಖ್ಯಪರೀಕ್ಷೆಯನ್ನು ಮಾತ್ರ ಮುಂದೂಡಿದೆ’ ಎಂದು ಅವರು ದೂರಿದರು.
ಪರೀಕ್ಷೆ ಮುಂದೂಡಲು ಕೆಪಿಎಸ್ಸಿಗೆ ಸೂಚನೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ಭಾಸ್ಕರ್ ಅವರಿಗೆ ಅಭ್ಯರ್ಥಿಗಳು ಗುರುವಾರ ಮನವಿ ಸಲ್ಲಿಸಿದರು.