ಬೆಂಗಳೂರು: ಮದ್ಯದ ಅಮಲಿನಲ್ಲಿ ಬಿದ್ದು ಗಾಯಗೊಂಡಿದ್ದ ದಿನೇಶ್ ಸುಬ್ಬಾ (31), ತಮ್ಮ ಮೇಲೆ
ಹಲ್ಲೆಯಾಗಿರುವುದಾಗಿ ಸುಳ್ಳು ದೂರು ನೀಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
‘ಸಿಕ್ಕಿಂನ ದಿನೇಶ್, ನಗರದ ರೆಸ್ಟೋರೆಂಟ್ವೊಂದರ ಕೆಲಸಗಾರ. ಚೀನಾ ಪ್ರಜೆಯೆಂದು ತಿಳಿದು ದುಷ್ಕರ್ಮಿಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ದಿನೇಶ್ ಅವರೇ ಸುಳ್ಳು ದೂರು ನೀಡಿರುವುದು ಗೊತ್ತಾಗಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸ್ ಮೂಲಗಳು ಹೇಳಿವೆ.
ಮದುವೆ ವಾರ್ಷಿಕೋತ್ಸವ ಪಾರ್ಟಿ: ‘ದಿನೇಶ್ ಅವರು ಪತ್ನಿ ಹಾಗೂ ಮೂರು ತಿಂಗಳ ಮಗುವಿನ ಜೊತೆ ದೊಡ್ಡ ತೋಗೂರಿನಲ್ಲಿ ವಾಸವಿದ್ದಾರೆ. ಆಗಸ್ಟ್ 15ರಂದು ದಿನೇಶ್
ಮದುವೆ ವಾರ್ಷಿಕೋತ್ಸವವಿತ್ತು. ಹೀಗಾಗಿ, ಸ್ನೇಹಿತರ ಜೊತೆ
ಪಾರ್ಟಿ ಮಾಡಲು ದಿನೇಶ್ ರಾತ್ರಿ ಹೋಟೆಲ್ಗೆ ಹೋಗಿದ್ದರು’
ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪಾರ್ಟಿ ಮುಗಿಸಿ ಮನೆಯತ್ತ ನಡೆದುಕೊಂಡು ಹೊರಟಿದ್ದರು. ಮದ್ಯದ ಅಮಲಿನಲ್ಲಿದ್ದ ಅವರು, ರಸ್ತೆಯಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ರಸ್ತೆಯಲ್ಲಿ ಬಿದ್ದಿರುವುದಾಗಿ ಪತ್ನಿಗೆ ಹೇಳಿದರೆ ಬೈಯುತ್ತಾರೆಂದು ತಿಳಿದಿದ್ದರು. ಹೀಗಾಗಿ, ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿ ಸುಳ್ಳು ದೂರು ನೀಡಿದ್ದರು. ಅವರಿಗೆ ಪುನಃ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.