ಬೆಂಗಳೂರು:ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವಕ್ಕೆ ಸುಮಾರು 72 ಕಂಪನಿಗಳು ಆಸಕ್ತಿ ತೋರಿಸಿದ್ದು, ಕಂಪ್ಯೂಟರ್, ಟ್ಯಾಬ್ ಸಹಿತ ಹಲವು ರೀತಿಯಲ್ಲಿ ಕೊಡುಗೆ ನೀಡುವ ವಾಗ್ದಾನ ಮಾಡಿವೆ.
ವಿಕಾಸಸೌಧದಲ್ಲಿ ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ‘ಸಾರ್ವಜನಿಕ ಶಿಕ್ಷಣ ಬಲಪಡಿಸುವಲ್ಲಿ ಖಾಸಗಿ ಸಹಭಾಗಿತ್ವ’ ಕುರಿತ ಸಂವಾದದಲ್ಲಿ ಈ ಕಂಪನಿಗಳು ಸುಮಾರು ₹150 ಕೋಟಿ ವೆಚ್ಚದ ಕಾಮಗಾರಿಗಳು, ಕೊಡುಗೆಗಳನ್ನು ನೀಡುವತಮ್ಮ ಬದ್ಧತೆ ಪ್ರದರ್ಶಿಸಿದವು.
ಇದುವರೆಗೆ ಶಾಲಾ ಕಟ್ಟಡ, ಕೊಠಡಿಗಳನ್ನು ನಿರ್ಮಿಸಲು ಮುಂದಾಗುತ್ತಿದ್ದ ಭಾರತೀಯ ಯುವ ತೇರಾಪಂತ್ ಸಮಿತಿಯ ವಿಮಲ್ ಕಠಾರಿಯಾ, ಶಾಲೆಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವ ಉಪಕ್ರಮಕ್ಕೆ ಮುಂದಾಗಿರುವುದಾಗಿ ಪ್ರಕಟಿಸಿದರು ಹಾಗೂ ಸಾಂಕೇತಿಕವಾಗಿ ಕಂಪ್ಯೂಟರ್, ಲ್ಯಾಪ್ಟಾಪ್ಗಳನ್ನು ಹಸ್ತಾಂತರಿಸಿದರು.
‘100 ಶಾಲಾ ಕೊಠಡಿಗಳ ನಿರ್ಮಾಣ ಪ್ರಗತಿಯಲ್ಲಿವೆ, ಇನ್ನು ನಾವು ಶಾಲೆಗಳಲ್ಲಿ ಹಸಿರೀಕರಣ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಿದ್ದೇವೆ’ ಎಂದರು.
ಸ್ಯಾಮ್ಸಂಗ್ ಕಂಪನಿಯಿಂದ ತುಮಕೂರು ಮತ್ತು ರಾಮನಗರ ಜಿಲ್ಲೆಯ 50 ಶಾಲೆಗಳಿಗೆ 1,000 ಇ-ಕಂಟೆಂಟ್ ಸಮೇತ ಟ್ಯಾಬ್ಗಳನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 50 ಶಾಲೆಗಳಿಗೆ 1,000 ಟ್ಯಾಬ್ಗಳನ್ನು ಒದಗಿಸುವುದಾಗಿತಿಳಿಸಲಾಯಿತು.
ದೆಹಲಿಯ ಥಿಂಕ್ ಥ್ರೂ ಕನ್ಸಲ್ಟೆಂಟ್ಸ್,ಬಿಐಎಲ್, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ , ಎಂಬೆಸಿ ಗ್ರೂಪ್, ಬಯೋಕಾನ್, ಎಚ್ಪಿಇಂಡಿಯಾ, ಟೊಯೊಟಾ, ಅಜೀಂ ಪ್ರೇಮ್ಜಿ ಪ್ರತಿಷ್ಠಾನ ಮೊದಲಾದ ಕಂಪನಿಗಳು, ಸೇವಾ ಸಂಸ್ಥೆಗಳಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಪ್ರಧಾನಿ ಜತೆಗಿನ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮಕ್ಕೆ ರಾಜ್ಯದ 42 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ 27 ಮಂದಿ ಸರ್ಕಾರಿ ಶಾಲೆಗಳ ಮಕ್ಕಳು.