ಬೆಂಗಳೂರು: ವಾಯುಸೇನೆ ಆವರಣದೊಳಗೆ ಹೋಗಿ ಗಲಾಟೆ ಮಾಡಿ ಸೇನಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಬಿಬಿಎಂಪಿಯ ನಿವೃತ್ತ ಅಧಿಕಾರಿ ಕೆ. ಮಥಾಯ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮೇ 28ರಂದು ನಡೆದಿರುವ ಘಟನೆ ಸಂಬಂಧ ವಾಯುಸೇನೆ ಅಧಿಕಾರಿ ದೂರು ನೀಡಿದ್ದಾರೆ. ಮಥಾಯ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬಳ್ಳಾರಿ ರಸ್ತೆಯಲ್ಲಿರುವ ವಾಯುಸೇನೆ ಆವರಣದಲ್ಲಿ ವಾಹನ ಸಂಚಾರ ಮುಕ್ತ ದಿನದ ಅಂಗವಾಗಿ ಎಲ್ಲ ಬಗೆಯ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ವಾಯುಸೇನೆಯ ನಿವೃತ್ತ ಅಧಿಕಾರಿಯೂ ಆಗಿರುವ ಮಥಾಯ್, ಸೇನೆ ಕ್ಯಾಂಟಿನ್ಗೆ ಹೋಗಲು ಆವರಣದಲ್ಲಿ ಕಾರು ಚಲಾಯಿಸಿಕೊಂಡು ಹೊರಟಿದ್ದರು.’
‘ಮಥಾಯ್ ಕಾರು ತಡೆದಿದ್ದ ಭದ್ರತಾ ಸಿಬ್ಬಂದಿ, ಒಳಗಡೆ ಹೋಗಲು ಅವಕಾಶವಿಲ್ಲವೆಂದು ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಮಥಾಯ್, ಸಿಬ್ಬಂದಿ ಜೊತೆಗೆ ಗಲಾಟೆ ಮಾಡಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದ್ದರು’ ಎಂದೂ ಮೂಲಗಳು ಹೇಳಿವೆ.