ಬೆಂಗಳೂರು: ಉದ್ಯೋಗಿಗಳ ವೇತನದಿಂದ ಕಡಿತಗೊಳಿಸಿದ್ದ ಭವಿಷ್ಯ ನಿಧಿ (ಪಿಎಫ್) ಹಣವನ್ನು ಇಲಾಖೆಗೆ ಪಾವತಿ ಮಾಡದ ಆರೋಪದಡಿ ಖಾಸಗಿ ಕಂಪನಿಯ ಇಬ್ಬರು ನಿರ್ದೇಶಕರ ವಿರುದ್ಧ ಜೆ.ಪಿ.ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಭವಿಷ್ಯ ನಿಧಿ ಅಧಿಕಾರಿ ಪಿಯೂಶ್ಕುಮಾರ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಅವಿನಾಶ್ ಪ್ರಭು ಹಾಗೂ ಧೀರಜ್ ಪ್ರಭು ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಲ್ಮನೆ ಟ್ರೇಡಿಂಗ್ ಕಂಪನಿ ನಡೆಸುತ್ತಿರುವ ಆರೋಪಿಗಳು, 2016ರ ಆಗಸ್ಟ್ನಿಂದ 2019ರ ಅಕ್ಟೋಬರ್ವರೆಗೆ ಉದ್ಯೋಗಿಗಳ ವೇತನದಿಂದ ಭವಿಷ್ಯ ನಿಧಿಗೆಂದು ₹ 18.13 ಲಕ್ಷ ಕಡಿತಗೊಳಿಸಿದ್ದರು. ಅದನ್ನು ಇಲಾಖೆಗೆ ತುಂಬಿರಲಿಲ್ಲವೆಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರ ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.